ಕಾರವಾರ: ಜಿಲ್ಲೆಯಲ್ಲಿ ಗುರುವಾರ ಮಳೆ ಪ್ರಮಾಣ ತಗ್ಗಿದ್ದರೂ ಗಾಳಿಯ ವೇಗ ಹೆಚ್ಚಿದ್ದ ಪರಿಣಾಮ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಇದರಿಂದ ಕಾರವಾರ ತಾಲ್ಲೂಕಿನ ದೇವಬಾಗದಲ್ಲಿ 8 ಹೆಕ್ಟೇರ್ನಷ್ಟು ಗಾಳಿಗಿಡಗಳ ನೆಡುತೋಪು ನಾಶವಾಗಿದೆ.
‘ಗಾಳಿಗಿಡಗಳ ನೆಡುತೋಪಿಗೆ ಸಮೀಪದಲ್ಲಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಗೆ ಸೇರಿದ ಬೀಚ್ ರೆಸಾರ್ಟ್ನ 4 ಕಾಟೇಜ್ಗಳು ಅಲೆಗಳ ಅಬ್ಬರಕ್ಕೆ ಹಾನಿಗೀಡಾಗಿವೆ. ಎರಡು ಕಾಟೇಜ್ಗಳು ನೀರಿನಲ್ಲಿ ಕೊಚ್ಚಿ ಹೋದರೆ, ಇನ್ನೂ ಎರಡು ಕಾಟೇಜ್ಗಳಿಗೆ ಹಾನಿಯಾಗಿದೆ. ₹1 ಕೋಟಿಯಷ್ಟು ನಷ್ಟವಾಗಿದೆ’ ಎಂದು ರೆಸಾರ್ಟ್ ವ್ಯವಸ್ಥಾಪಕರು ತಿಳಿಸಿದ್ದಾರೆ.
‘ಸಮುದ್ರದ ಅಲೆಗಳು ನಿರೀಕ್ಷಿತ ಮಟ್ಟಕ್ಕಿಂತ ಮೇಲಕ್ಕೆ ಅಪ್ಪಳಿಸುವ ಪರಿಣಾಮ ಗಾಳಿಗಿಡಗಳ ನೆಡುತೋಪು ಕೊಚ್ಚಿ ಹೋಗಿದೆ. ನೂರಾರು ಮರಗಳು, ಗಿಡಗಳು ಬುಡ ಸಮೇತ ಕಿತ್ತು ಸಮುದ್ರ ಪಾಲಾಗಿವೆ. 8 ಹೆಕ್ಟೇರ್ ನಷ್ಟು ನಷ್ಟವಾಗಿದೆ. ಕಳೆದ ವರ್ಷ ಏಳು ಹೆಕ್ಟೇರ್ ಪ್ರದೇಶದಲ್ಲಿ ಗಿಡಮರ ನಾಶವಾಗಿದ್ದವು’ ಎಂದು ಕಾರವಾರ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ರವಿಶಂಕರ ತಿಳಿಸಿದ್ದಾರೆ.
ಸತತ ಮಳೆ ಪರಿಣಾಮ ಸಿದ್ದಾಪುರ ತಾಲ್ಲೂಕಿನ ಹಸ್ವಿಗುಳಿ ಗ್ರಾಮದಲ್ಲಿ ಗುಡ್ಡ ಕುಸಿದಿದೆ. ಸಮೀಪದಲ್ಲಿದ್ದ ಮನೆಗಳಿಗೆ ಹಾನಿಯಾಗಿಲ್ಲ. ಬುಧವಾರ ರಾತ್ರಿ ಹೊನ್ನಾವರ–ಸಾಗರ ರಾಷ್ಟ್ರೀಯ ಹೆದ್ದಾರಿ 206ರ ಭಾಸ್ಕೇರ ಸಮೀಪ ಗುಡ್ಡ ಕುಸಿದಿದ್ದರಿಂದ ಕೆಲ ಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.