ADVERTISEMENT

ಮಾರಾಟಕ್ಕೆ ಬಂದ ಕೆಂಪು ಅಣಬೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:23 IST
Last Updated 13 ಜೂನ್ 2024, 14:23 IST
ಜೊಯಿಡಾದಲ್ಲಿ ಗುರುವಾರ ಮಾರಾಟಕ್ಕೆ ಇಟ್ಟ ಕೆಂಪು (ಪಾವ)ಅಣಬೆ
ಜೊಯಿಡಾದಲ್ಲಿ ಗುರುವಾರ ಮಾರಾಟಕ್ಕೆ ಇಟ್ಟ ಕೆಂಪು (ಪಾವ)ಅಣಬೆ   

ಜೊಯಿಡಾ: ಮಳೆಗಾಲದ ಆರಂಭದಲ್ಲಿ ತಾಲ್ಲೂಕಿನ ಕಾಡಿನಲ್ಲಿ ನದಿ ಮತ್ತು ಹಳ್ಳಿಗಳ ದಂಡೆಯಲ್ಲಿ ನಿಸರ್ಗದತ್ತವಾಗಿ ಬೆಳೆಯುವ ಕೆಂಪು ಅಣಬೆ ಮಾರುಕಟ್ಟೆಗೆ ಬರುತ್ತಿದ್ದು ಗ್ರಾಮೀಣ ಭಾಗದ ಜನರಿಗೆ  ಆದಾಯದ ಮೂಲವಾಗಿದೆ.

ತಾಲ್ಲೂಕಿನ ಅಣಶಿ ಅಕ್ಕಪಕ್ಕದ ಬಾಡಪೋಲಿ, ಮೈಯಂಗಿಣಿ, ಬಾಕಿತ ಮತ್ತು ಮಾಟಗಾಂವ ಭಾಗದಲ್ಲಿ ಮೊದಲ ಮಳೆಗೆ ಕಾಡಿನಲ್ಲಿ ಪಾವ ಎಂಬ ಮರದ ಎಲೆಗಳಲ್ಲಿ ಬೆಳೆಯುವ ಈ ಕೆಂಪು ಅಣಬೆಗಳನ್ನು ಆರಂಭದಲ್ಲಿ ಗ್ರಾಮೀಣ ಭಾಗದ ಜನರು ಮಾತ್ರ ಸಾಂಬಾರು ಅಥವಾ ಪಲ್ಯ ಮಾಡಲು ಬಳಸುತ್ತಿದ್ದರು, ವಾರಗಟ್ಟಲೆ ಇವುಗಳು ಸಿಗುತ್ತಿದ್ದವು. ಆದರೆ ಕೆಲವು ವರ್ಷಗಳಿಂದ ಗ್ರಾಮೀಣ ಜನರು ಆದಾಯ ಗಳಿಸಲು  ಪಟ್ಟಣಗಳಿಗೆ ಮಾರಾಟಕ್ಕಾಗಿ ತರುವುದರಿಂದ ತಾಲ್ಲೂಕಿನಾದ್ಯಂತ ಜನರು ಅಣಬೆಗಳನ್ನು ಖರೀದಿಸುತ್ತಾರೆ.‌

ನುಜ್ಜಿ ನದಿಯ ದಂಡೆಯ ಮೇಲೆ ಕಡಿಮೆ ಪ್ರಮಾಣದಲ್ಲಿ ಈ ಅಣಬೆಗಳು ಬೆಳೆಯುತ್ತವೆ. ಕುಂಬಾರವಾಡ, ಜೊಯಿಡಾ ಹಾಗೂ ಇನ್ನಿತರ ಭಾಗಗಳಿಂದ ಜನರು ವಾಹನಗಳಲ್ಲಿ ಬಂದು ಕಾಡಿನಲ್ಲಿ ಅಲೆದು ಅಣಬೆಗಳನ್ನು ತೆಗೆದುಕೊಂಡು ಹೋಗುವುದರಿಂದ ಮತ್ತು ಮಾರಾಟಕ್ಕೆ ಸ್ಥಳೀಯರು ಅಧಿಕ ಪ್ರಮಾಣದಲ್ಲಿ ಅಣಬೆಗಳನ್ನು ಕೊಂಡೊಯ್ಯುವುದರಿಂದ ಇತ್ತೀಚಿನ ವರ್ಷಗಳಲ್ಲಿ ಮೂರ್ನಾಲ್ಕು ದಿನಗಳಲ್ಲಿ ಅಣಬೆಗಳು ಖಾಲಿಯಾಗುತ್ತೆವೆ.

ADVERTISEMENT

ಗುರುವಾರ ಜೊಯಿಡಾ ಮತ್ತು ಕುಂಬಾರವಾಡದಲ್ಲಿ ಅಣಶಿ, ಭಾರಾಡಿ ಭಾಗದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರು ಅಣಬೆಗಳನ್ನು ಮಾರಾಟ ಮಾಡಲು ಬಂದಿದ್ದು ಸುಮಾರು ₹ 30 ಸಾವಿರ ರೂಪಾಯಿ ಅಧಿಕ ವ್ಯಾಪಾರ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.