ಕುಮಟಾ: ತಾಲ್ಲೂಕಿನ ಸಂತೆಗುಳಿ ಬಳಿ ಕುಮಟಾ-ಸಿದ್ದಾಪುರ ರಸ್ತೆ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆ ಜಾಗದಲ್ಲಿ ಅತಿಕ್ರಮಿಸಿ ನಿರ್ಮಿಸಿದ್ದ ಅಂಗಡಿ ತೆರವಿಗೆ ಅಧಿಕಾರಿಗಳು ಮುಂದಾದಾಗ ಸ್ಥಳೀಯ ಕೆಲವರು ಇಲಾಖೆ ಎಂಜಿನಿಯರ್ ಅವರನ್ನು ನೂಕಿ ಜೀವ ಬೆದರಿಕೆ ಹಾಕಿದ್ದಾಗಿ ಗುರುವಾರ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೆಗುಳಿ ಗ್ರಾಮದ ನಿವಾಸಿಗಳಾದ ಮುಜಾಫರ್ ಸಾಬ್ (45), ಮನ್ಸೂರ್ ಸಾಬ್ (35) ಹಾಗೂ ಅಬುತಾಲಿಬ್ ಸಾಬ್ (48) ಎನ್ನುವವರ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
‘ಸಂತೆಗುಳಿ ಮುಖ್ಯ ಪ್ರದೇಶದಲ್ಲಿ ಅಬ್ದುಲ್ ಶುಕುರ್ ಸಾಬ್ ಮತ್ತು ಅಲಿ ಸಾಬ್ ಎನ್ನುವವರು ಲೋಕೋಪಯೋಗಿ ಇಲಾಖೆ ಜಾಗದಲ್ಲಿ ಅಂಗಡಿ ಕಟ್ಟಿಕೊಂಡು ವ್ಯಾಪಾರ ನಡೆಸುತ್ತ ಬಂದಿದ್ದರು. ಅಂಗಡಿ ತೆರವಿಗೆ ನೋಟಿಸ್ ನೀಡಿದ್ದರೂ ಸ್ಪಂದಿಸದ ಕಾರಣ ಸಹಾಯಕ ಎಂಜಿನಿಯರ್ ಸೋಮನಾಥ ಭಂಡಾರಿ ಹಾಗೂ ಸಿಬ್ಬಂದಿ ಕಟ್ಟಡ ತೆರವಿಗೆ ಮುಂದಾದಾಗ ಆರೋಪಿಗಳು ಸೋಮನಾಥ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಲಾಖೆಯ ಎಇಇ ಎಂ.ಪಿ.ನಾಯ್ಕ, ತಹಶೀಲ್ದಾರ್ ಪ್ರವೀಣ ಕರಾಂಡೆ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ಕೈ ಮೀರದಂತೆ ಕ್ರಮ ಕೈಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.