ADVERTISEMENT

ಸನಾತನ ಧರ್ಮದ ವ್ಯಾಖ್ಯಾನ ತಿಳಿಸಿ: ಎಚ್.ಎನ್. ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 7:08 IST
Last Updated 24 ಸೆಪ್ಟೆಂಬರ್ 2023, 7:08 IST
<div class="paragraphs"><p>ಎಚ್.ಎನ್. ನಾಗಮೋಹನದಾಸ್</p></div>

ಎಚ್.ಎನ್. ನಾಗಮೋಹನದಾಸ್

   

ಶಿರಸಿ: ಸನಾತನ ಧರ್ಮದ ವಿಷಯವಾಗಿ ಗೊಂದಲ ಸೃಷ್ಟಿಸುವ ಬದಲು ಅದರ ಬಗ್ಗೆ ಜನಸಾಮಾನ್ಯರಿಗೆ ವ್ಯಾಖ್ಯಾನಿಸುವ ಗುರುತರ ಜವಾಬ್ದಾರಿ ಸನಾತನದ ಪರ ನಿಂತವರ ಮೇಲಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು.

ಶಿರಸಿಯಲ್ಲಿ ಭಾನುವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಸರಿಯಾದ ವ್ಯಾಖ್ಯಾನ ಈವರೆಗೆ ಇಲ್ಲ. ಹೀಗಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಇಂಥ ಕಾಲಘಟ್ಟದಲ್ಲಿ ಸನಾತನ ಧರ್ಮದ ಪರ ನಿಂತವರು ಅದರ ಸರಿಯಾದ ವ್ಯಾಖ್ಯಾನವನ್ನು ಜನತೆಗೆ ತಿಳಿಯಪಡಿಸಬೇಕು. ಒಂದೊಮ್ಮೆ ಅದು ಮನುಕುಲ, ಸಮಾಜಕ್ಕೆ ಒಳ್ಳೆಯದು ಮಾಡುತ್ತದೆ ಎಂದಾದರೆ ಒಪ್ಪಬಹುದು. ಆದರೆ ಜನವಿರೋಧಿ ಅಂಶಗಳಿದ್ದರೆ ವಿರೋಧಿಸಬೇಕು ಎಂದರು.

ADVERTISEMENT

ಸಂವಿಧಾನದ ಪೀಠಿಕೆಗೆ 42ನೇ ತಿದ್ದುಪಡಿ ಆಧಾರದ ಮೇಲೆ ಸೇರಿಸಿರುವ ಜಾತ್ಯತೀತ, ಸಮಾಜವಾದ ಹಾಗೂ ಸಮಗ್ರತೆ ಪದಗಳನ್ನು ಕೇಂದ್ರ ಸರ್ಕಾರ ತೆಗೆದು ಸಂವಿಧಾನ ಪೀಠಿಕೆ ಹಂಚಿರುವುದು ತಪ್ಪು ಕೆಲಸ. ಇದು ಆಕಸ್ಮಿಕ ಅಥವಾ ಕಣ್ತಪ್ಪಿನಿಂದಾದ ಕೆಲಸವಲ್ಲ ಬದಲಾಗಿ ಉದ್ದೇಶ ಪೂರ್ವಕವಾಗಿ ಮಾಡಿದ ಕಾರ್ಯ. ಇದು ಖಂಡನೀಯ. ಹಾಗಾಗಿ ಸರ್ಕಾರವು ಇನ್ನು ಮುಂದೆ ಇಂಥ ಗುರುತರ ತಪ್ಪು ಆಗದಂತೆ ಎಚ್ಚರಿಕೆವಹಿಸಬೇಕು ಎಂದರು.

ಕಳೆದ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳಲ್ಲಿ ಆಗಿದೆ ಎನ್ನಲಾದ 40 ಪರ್ಸಂಟೇಜ್ ಹಗರಣದ ತನಿಖೆಯು ಆಯೋಗದ ಮೂಲಕ ಇನ್ನಷ್ಟೇ ಆರಂಭವಾಗಬೇಕು. ಸರ್ಕಾರ ನೀಡಿದ ಆದೇಶದಲ್ಲಿ ಕೆಲವು ಅಸ್ಪಷ್ಟತೆಯಿದೆ. ಅವುಗಳನ್ನು ಸರಿಪಡಿಸಿಕೊಂಡು ಬರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದು ಬಂದ ಬಳಿಕ ಪ್ರಕರಣದ ಮಾಹಿತಿ ಸಂಗ್ರಹಿಸಿ ಸತ್ಯ ಹೊರತರಲು ಪ್ರಯತ್ನಿಸಲಾಗುವುದು ಎಂದರು.

ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ ಆಗಿರುವುದು ಸ್ವಾಗತಾರ್ಹ ಎಂದ ಅವರು, 2011ರ ಜನಗಣತಿ ಆಧಾರದ ಮೇಲೆ 2024ರ ಲೋಕಸಭೆಯಲ್ಲಿ ಈ ಮೀಸಲಾತಿ ಅನುಷ್ಠಾನಕ್ಕೆ ತರಲು ಅವಕಾಶವಿದೆ. ಇದರ ಬಗ್ಗೆ ಸರ್ಕಾರ ಆದ್ಯತೆ ನೀಡುವ ಜತೆ ಮಹಿಳೆಯರಿಗೆ ಒಳ ಮೀಸಲಾತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.