ಭಟ್ಕಳ: ಪ್ರತಿ ವರ್ಷದಂತೆ ಸಂಕ್ರಾಂತಿಯ ನಂತರದ ತಾಲ್ಲೂಕಿನ ಪ್ರಥಮ ಜಾತ್ರೆ ಹೆಬಳೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೇಡಬರಿ ಜಟಕಾ ಮಹಾಸತಿ ದೇವರ ಜಾತ್ರೆ ಸೋಮವಾರ ಸಂಜೆ ನಡೆಯಿತು.
ಜಾತ್ರೆಯ ಪ್ರಯುಕ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹರಕೆ, ಕಾಣಿಕೆ ಸಲ್ಲಿಕೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಭಕ್ತರು ತಮಗೆ ಕಷ್ಟ ಬಂದ ಸಂದರ್ಭದಲ್ಲಿ ಹೇಳಿಕೊಂಡ ಪೂಜೆ, ಶೇಡಿಮರದ ಹರಕೆಯನ್ನು ಭಕ್ತಿ ಪೂರ್ವಕವಾಗಿ ನೆರವೇರಿಸಿದರು. ಜಾತ್ರೆಗೆ ಹೆಬಳೆ ಭಾಗದವರಷ್ಟೇ ಅಲ್ಲದೇ ತಾಲ್ಲೂಕಿನ ವಿವಿಧ ಭಾಗಗಳ ಜನರೂ ಆಗಮಿಸಿ ಪೂಜೆ ಸಲ್ಲಿಸಿದರು.
ಜಾತ್ರೆಯಲ್ಲಿ ಹಲವು ಭಕ್ತರು ಶೇಡಿ ಮರವನ್ನು ಏರಿ ತಮ್ಮ ಸಂಕಷ್ಟ ನಿವಾರಣೆಗಾಗಿ ಹೇಳಿಕೊಂಡ ಹರಿಕೆಯನ್ನು ತೀರಿಸಿದರು. ಕಷ್ಟ–ಕಾರ್ಪಣ್ಯ ಬಂದೊದಗಿದ ಸಂದರ್ಭದಲ್ಲಿ ಶೇಡಿ ಮರದ ಹರಕೆ ಹೇಳಿಕೊಳ್ಳುವುದು ಇಲ್ಲಿನ ವಾಡಿಕೆ. ಹೀಗಾಗಿಯೇ ಶೇಡಬರಿ ಜಾತ್ರೆಯಲ್ಲಿ ಸೇಡಿಮರದ ಹರಕೆಗೆ ಮಹತ್ವವಿದ್ದು, ಜಾತ್ರೆಯಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ಶೇಡಿ ಮರದ ಹರಕೆ ಸಲ್ಲಿಸಿದರು.
ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಪೂರ್ವಕವಾಗಿ ಹರಕೆ, ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಜಾತ್ರಾ ಸ್ಥಳದಲ್ಲಿದ್ದು, ಪೂಜಾ ಮತ್ತು ಹರಕೆ ಕಾರ್ಯಗಳು ಸಾಂಗವಾಗಿ ನಡೆಯಲು ಸಹಕರಿಸಿದರು. ಜಾತ್ರಾ ಪ್ರಯುಕ್ತ ಮಂಗಳವಾರ ಮಧ್ಯಾಹ್ನದ ವರೆಗೆ ದೇವರಿಗೆ ವಿಶೇಷ ಪೂಜೆ, ಹರಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.