ADVERTISEMENT

ಶಿರಸಿ | ಜೀರ್ಣಾವಸ್ಥೆಯತ್ತ ಬನವಾಸಿ ಸ್ಮಾರಕಗಳು

ಪುರಾತತ್ವ ಇಲಾಖೆಯಿಂದ ನಿರ್ಲಕ್ಷ್ಯ ಧೋರಣೆ

ರಾಜೇಂದ್ರ ಹೆಗಡೆ
Published 26 ಜೂನ್ 2024, 4:24 IST
Last Updated 26 ಜೂನ್ 2024, 4:24 IST
ಶಿರಸಿ ತಾಲ್ಲೂಕಿನ ಬನವಾಸಿ ಸಮೀಪದ ಗುಡ್ನಾಪುರದ ರಾಣಿ ನಿವಾಸದಲ್ಲಿ ಜೀರ್ಣ ಸ್ಥಿತಿಯಲ್ಲಿರುವ ಜೈನ ತೀರ್ಥಂಕರರ ಮೂರ್ತಿ
ಶಿರಸಿ ತಾಲ್ಲೂಕಿನ ಬನವಾಸಿ ಸಮೀಪದ ಗುಡ್ನಾಪುರದ ರಾಣಿ ನಿವಾಸದಲ್ಲಿ ಜೀರ್ಣ ಸ್ಥಿತಿಯಲ್ಲಿರುವ ಜೈನ ತೀರ್ಥಂಕರರ ಮೂರ್ತಿ   

ಶಿರಸಿ: ಕನ್ನಡದ ಪ್ರಥಮ ರಾಜಧಾನಿಯಾಗಿದ್ದ ಬನವಾಸಿಯ ಇತಿಹಾಸದ ಪುಟ ತೆರೆದಿಡುವ ಪ್ರಾಚೀನ ಶಾಸನ, ಶಿಲ್ಪ, ವೀರಗಲ್ಲುಗಳು ಸೇರಿ ವಿವಿಧ ಸ್ಮಾರಕಗಳು ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ಸೂಕ್ತ ನೆಲೆಯಿಲ್ಲದೆ ಜೀರ್ಣಾವಸ್ಥೆ ತಲುಪುತ್ತಿವೆ. ಇವುಗಳ ಸಂರಕ್ಷಣೆಗೆ ಸಾರ್ವಜನಿಕರ ಒತ್ತಾಯ ಹೆಚ್ಚುತ್ತಿದೆ. 

ಬನವಾಸಿಯಲ್ಲಿ ಕ್ರಿ.ಶ 2ನೇ ಶತಮಾನದಲ್ಲಿ ಆಳ್ವಿಕೆ ಮಾಡಿದ ಶಾತವಾಹನರು, ಚುಟುಗಳು, ಕದಂಬ ಮನೆತನದ ಕುರುಹುಗಳು ಉತ್ಖನನದ ಸಂದರ್ಭದಲ್ಲಿ ದೊರೆತಿವೆ. ಬ್ರಾಹ್ಮಿಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಕ್ರಿ.ಶ 2ನೇ ಶತಮಾನದ ಸಿವಸಿರಿ ಪುಳುಮಾವಿಯ ಶಾಸನಶಿಲೆ ಬನವಾಸಿಯಲ್ಲಿ ದೊರೆತಿತ್ತು. ಈ ಶಾಸನ ಸೇರಿದಂತೆ, ಗಣಪತಿ, ನರಸಿಂಹ ಮೂರ್ತಿ, ವೀರಗಲ್ಲುಗಳು, 12ನೇ ಶತಮಾನದ ಪೂರ್ವದ 180ಕ್ಕೂ ಹೆಚ್ಚು ಸ್ಮಾರಕ ಶಿಲೆಗಳನ್ನು ಮಧುಕೇಶ್ವರ ದೇವಾಲಯದ ಎದುರಿನಲ್ಲಿರುವ ಸಾಮಾನ್ಯ ಕೊಠಡಿಯಲ್ಲಿ ವಿಶೇಷ ರಕ್ಷಣೆ ಇಲ್ಲದೆ ಸಂಗ್ರಹಿಸಿಡಲಾಗಿದೆ.

ಬಹುತೇಕ ಶಿಲ್ಪಗಳು ಹೇಗೆಂದರಲ್ಲಿ ಹಾಗೆ ಬಿದ್ದಿದ್ದು, ಅವುಗಳ ಮೂಲ ಸ್ವರೂಪ ಮರೆಯಾಗುತ್ತಿದೆ. ದೇವಾಲಯದ ಆವರಣದಲ್ಲಿರುವ ಶಾಸನ, ಶಿಲ್ಪಗಳು  ಅತ್ಯಮೂಲ್ಯವಾಗಿದ್ದು, ಇವುಗಳ ದಾಖಲೀಕರಣ, ಅಧ್ಯಯನ ಕಾರ್ಯ ಮುಗಿದು ದಶಕ ಕಳೆದಿದೆ. ಆದರೆ ಇವುಗಳನ್ನು ಸುರಕ್ಷಿತವಾಗಿಡುವ ಕಾರ್ಯ ನಡೆದಿಲ್ಲ.

ADVERTISEMENT

‘ಬನವಾಸಿ ಸಮೀಪದ ಗುಡ್ನಾಪುರ ರಾಣಿ ನಿವಾಸ ಉತ್ಖನನದ ವೇಳೆ ದೊರೆತ ಹಾಗೂ ಇದರ ಸುತ್ತಮುತ್ತ ಸಿಕ್ಕಿರುವ ಸ್ಮಾರಕಗಳನ್ನು ಶಿಥಿಲ ಸ್ಥಿತಿಯಲ್ಲಿರುವ ರಾಣಿ ನಿವಾಸದ ಕಟ್ಟಡದ ಒಳಗೆ ಇಡಲಾಗಿದೆ. ವೀರಭದ್ರ, ಗಣಪತಿ ಮೂರ್ತಿ, ಜೈನ ತೀರ್ಥಂಕರರ ಮೂರ್ತಿಗಳ ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಹೊರ ಆವರಣದಲ್ಲಿ ಕೇವಲ ತಂತಿ ಬೇಲಿ, ತಲೆಯ ಮೇಲೊಂದು ತಗಡಿನ ಶೀಟ್ ರಕ್ಷಣೆಯಲ್ಲಿ ರಾಜಾ ರವಿಮರ್ವನ ಕಾಲದ ಶಾಸನದ ಕಂಬ ನಿಂತಿದೆ. ಮಳೆ, ಗಾಳಿ, ಬಿಸಿಲಿಗೆ ಕೆಲವು ಶಿಲೆಗಳು ಕರಗಿವೆ. ಉಳಿದವು ಕೂಡ ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ' ಎಂದು ಸ್ಥಳೀಯರಾದ ರಾಜೇಶ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು. 

ಬನವಾಸಿ ಹೊರವಲಯದಲ್ಲಿ ಪ್ರವಾಸೋದ್ಯಮ ಇಲಾಖೆ 1984ರಲ್ಲಿ ₹18 ಲಕ್ಷ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಿಸಿತ್ತು. ಐದು ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ನಿರ್ಮಾಣವಾಗಿದ್ದ ಕಟ್ಟಡ ಪ್ರವಾಸಿಗರ ವಸತಿಗೆ ಬಳಕೆಯಾಗಿರಲಿಲ್ಲ. ಹಾಗಾಗಿ ಕಟ್ಟಡ ಸದ್ಬಳಕೆ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯಿಂದ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಯಿತು.

ದೇವಾಲಯದ ಆವರಣದಲ್ಲಿದ್ದ ಪ್ರಾಚೀನ ಸ್ಮಾರಕ ಶಿಲೆಗಳನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಿ ಬನವಾಸಿಗೆ ಬರುವ ಪ್ರವಾಸಿಗರಿಗೆ ಪ್ರಾಚ್ಯವಸ್ತು ಸಂಗ್ರಹಾಲಯ ವೀಕ್ಷಿಸುವ ಅವಕಾಶ ಕಲ್ಪಿಸಲು ಪುರಾತತ್ವ ಇಲಾಖೆ ಯೋಜನೆ ರೂಪಿಸಿತು. ಅಂತೆಯೇ ಸುಮಾರು ₹ 20 ಲಕ್ಷ ವೆಚ್ಚದಲ್ಲಿ ಕಟ್ಟಡದ ನವೀಕರಣ ಕಾಮಗಾರಿ ನಡೆಯಿತು. ಆದರೆ ನವೀಕರಣಗೊಂಡು ಅನೇಕ ವರ್ಷಗಳು ಗತಿಸಿದರೂ ಉದ್ದೇಶಿತ ಕಾರ್ಯಕ್ಕೆ ಬಳಸಲು ಪುರಾತತ್ವ ಇಲಾಖೆ ಅದೇಕೋ ಮೀನಮೇಷ ಎಣಿಸುತ್ತಿದೆ ಎಂಬುದು ಸಾರ್ವಜನಿಕ ದೂರು.

ಸಿಬ್ಬಂದಿ ಕೊರತೆ

‘ವಸ್ತು ಸಂಗ್ರಹಾಲಯದ ಆವರಣದಲ್ಲಿ ಉದ್ಯಾನ ಬೋರವೆಲ್‌ ನಿರ್ಮಾಣ ಮಾಡಿ ಇನ್ನಷ್ಟು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಅನುದಾನದ ಅಗತ್ಯವಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಇಲಾಖೆಯಲ್ಲಿ ಹೊಸ ನೇಮಕಾತಿ ಆಗುತ್ತಿಲ್ಲ. ಹೀಗಾಗಿ ಸ್ಥಳಾಂತರಕ್ಕೆ ತೊಡಕಾಗುತ್ತಿದೆ’ ಎಂದು ಪುರಾತತ್ವ ಇಲಾಖೆ ಸಿಬ್ಬಂದಿ ತಿಳಿಸಿದರು.

ಮಧುಕೇಶ್ವರ ದೇವಾಲಯದ ಆವರಣದಲ್ಲಿರುವ ಕನ್ನಡದ ಅಸ್ಮಿತೆ ಪ್ರತಿಬಿಂಬಿಸುವ ಶಾಸನ ಶಿಲ್ಪಗಳ ರಕ್ಷಣೆಗೆ ತಕ್ಷಣ ಬನವಾಸಿಯಲ್ಲಿ ಅತ್ಯುತ್ತಮ ಸೌಲಭ್ಯವುಳ್ಳ ಆಧುನಿಕ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು.
ಲಕ್ಷ್ಮೀಶ ಸೋಂದಾ, ಇತಿಹಾಸ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.