ಶಿರಸಿ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವದ್ಯೋಗಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸ್ವಾವಲಂಬಿಗಳಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಈಶ್ವರಕುಮಾರ ಕಾಂದೂ ಹೇಳಿದರು.
ನಗರದ ಕಾನಕೊಪ್ಪದ ಹಾಲು ಉತ್ಪಾದಕ ಮಹಿಳಾ ಸಂಘದ ಸದಸ್ಯರನ್ನು ಮಂಗಳವಾರ ಭೇಟಿ ಮಾಡಿ, ಹಾಲು ಡೈರಿ ಸ್ಥಾಪನೆಗೆ ಕಾರಣ, ಡೈರಿಯ ನಿರ್ವಹಣೆ, ಹಾಲು ಖರೀದಿ, ಲಾಭಾಂಶ ವಿತರಣೆ ಮುಂತಾದ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡ ಅವರು, ಮಹಿಳೆಯರು ಮತ್ತು ಹೈನುಗಾರಿಕೆಗಿರುವ ಅನ್ಯೋನ್ಯ ಸಂಬಂಧದ ಕುರಿತು ಚುಟುಕಾಗಿ ತಿಳಿಸಿ, ಹೈನುಗಾರಿಕೆಯಿಂದಲೇ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದೆಂದು ಸದಸ್ಯೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದರು.
ನಂತರ ಕಾನಕೊಪ್ಪ ಗ್ರಾಮದ ಸುಭಾಶ್ಚಂದ್ರ ಶಿರಾಲಿ ಅವರ ಆಲೆಮನೆಗೆ ಭೇಟಿ ನೀಡಿದರು. ಆಲೆಮನೆ ನಿರ್ಮಾಣ, ನಿರ್ವಹಣೆ, ಕಬ್ಬಿನ ಲಭ್ಯತೆ ಹಾಗೂ ಮಾರುಕಟ್ಟೆ ಸವಾಲುಗಳ ಕುರಿತು ಚರ್ಚಿಸಿದರು. ನಂತರ ಆಲೆಮನೆಯಲ್ಲಿ ಕಬ್ಬಿನಿಂದ ಹಾಲು ತೆಗೆದು, ಕುದಿಸಿ ಸಾವಯವ ಬೆಲ್ಲ ತಯಾರಿಸುವುದನ್ನು ವೀಕ್ಷಿಸಿದರು. ಬೆಲ್ಲ ತಯಾರಿಕೆಯ ಹಂತದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗದಿರುವುದುನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿರಸಿ ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ, ಸಹಾಯಕ ನಿರ್ದೇಶಕ ಬಿ.ವೈ. ರಾಮಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.