ಶಿರಸಿ: ಆಡುಭಾಷೆಯಿಂದ ಉದ್ಭವಿಸಿದ ಸಾಹಿತ್ಯ ಅಜರಾಮರವಾಗುತ್ತದೆ. ಹಾಗಾಗಿ ಜನಮಾನಸದಿಂದ ಮರೆಯಾಗುತ್ತಿರುವ ಆಡುಭಾಷೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕ ಎಸ್.ಎಸ್.ಭಟ್ ಹೇಳಿದರು.
ನಗರದ ನೆಮ್ಮದಿ ಕುಟೀರದಲ್ಲಿ ಸೋಮವಾರ ನಡೆದ ಆಡುಭಾಷಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಾದೇಶಿಕ ಸೊಗಡಿನ ತಾಯಿಯ ಬಾಯಿನುಡಿಗಳು ನಮ್ಮ ಪರಂಪರಾಗತ ಜನಪದ ಭಾಷೆಯ ಸೊಗಡಿನ ಸ್ವಾದಿಷ್ಟ ಅನುಭವ ಅದ್ಭುತವಾಗಿರುತ್ತದೆ. ಮಾತೃಗಿಂತ ಶ್ರೇಷ್ಠ ಭಾಷೆ ಮತ್ತೊಂದಿಲ್ಲ ಎಂದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬರಹಗಾರ್ತಿ ದಾಕ್ಷಾಯಿಣಿ ಪಿ.ಸಿ ಮಾತನಾಡಿ, ತಂತ್ರಜ್ಞಾನವು ಉತ್ತುಂಗ ಸ್ಥಿತಿಯಲ್ಲಿರುವ ಈ ಕಾಲಘಟ್ಟದಲ್ಲಿ ಆಡುಭಾಷೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಲಿದೆ. ಮನುಷ್ಯ ತನ್ನ ಜೀವನದಲ್ಲಿ ಅದೆಷ್ಟೇ ಭಾಷೆಗಳನ್ನು ಕಲಿತರೂ ಮಾತೃಭಾಷೆ ಮರೆಯಬಾರದು ಎಂದು ತಿಳಿಸಿದರು.
ಬರಹಗಾರ ಜಗದೀಶ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿ, ಬರಹಗಾರರಲ್ಲಿ ಉದ್ಭವಿಸುವ ಸಾಹಿತ್ಯ ಶಕ್ತಿಯುತವಾಗಿದ್ದಲ್ಲಿ ಎಲ್ಲ ಕಡೆ ಪ್ರಭಾವ ಬೀರಿ, ಬಳಿಕ ಪ್ರಶಸ್ತಿ, ಗೌರವಾದರ ರೂಪದಲ್ಲಿ ಪುನಃ ಬರಹಗಾರನಲ್ಲಿಗೇ ಬರಲಿದೆ ಎಂದರು.
ಆಡುಭಾಷಾ ಕವಿಗೋಷ್ಠಿಯಲ್ಲಿ ರಮೇಶ ಹೆಗಡೆ ಕೆರೆಕೋಣ (ಪ್ರಥಮ), ದಿನೇಶ ಅಮ್ಮಿನಳ್ಳಿ (ದ್ವತೀಯ), ಪೂರ್ಣಿಮಾ ಹೆಗಡೆ (ತೃತೀಯ) ಬಹುಮಾನ ಪಡೆದುಕೊಂಡರು.
ಶೋಭಾ ಭಟ್ ಮತ್ತು ರೋಹಿಣಿ ಹೆಗಡೆ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಸಾಹಿತಿ ಎಂ.ಎಸ್.ಹೆಗಡೆ ಮತ್ತು ಚುಟುಕು ಕವಿ ದತ್ತಗುರು ಕಂಠಿ ಉಪಸ್ಥಿತರಿದ್ದರು.
ಕಥೆಗಾರ ಕೆ.ಮಹೇಶ ಸ್ವಾಗತಿಸಿದರು. ರೇಣುಕಾ ಬ್ಯಾಗದ್ದೆ ಪ್ರಾರ್ಥಿಸಿದರು. ಕವಯತ್ರಿ ಯಶಸ್ವಿನಿಮೂರ್ತಿ ನಿರ್ವಹಿಸಿದರು. ಎಸ್.ಎಮ್ ಹೆಗಡೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.