ಶಿರಸಿ: ಇಲ್ಲಿನ ಗಣೇಶನಗರದ ಅಂಗನವಾಡಿ ಕೇಂದ್ರ 6ರ ಬಳಿ ಗೌರಿ ನಾಯ್ಕ ಎಂಬುವರು ತೋಡುತ್ತಿದ್ದ ಬಾವಿಯನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಬಂದ್ ಮಾಡಲಾಯಿತು.
ಎರಡು ವಾರದಿಂದ ಒಂಟಿಯಾಗಿ 57 ವರ್ಷದ ಗೌರಿ ನಾಯ್ಕ ಅಂದಾಜು 30 ಅಡಿ ಆಳ ಬಾವಿ ತೋಡಿದ್ದರು. ಇದಕ್ಕೆ ಮಹಿಳಾ ಅಭಿವೃದ್ಧಿ ಇಲಾಖೆಯ ಅನುಮತಿ ಇಲ್ಲ ಎಂಬ ಕಾರಣಕ್ಕೆ ಗೊಂದಲವಾಗಿತ್ತು. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಥಳಕ್ಕೆ ಭೇಟಿ ನೀಡಿ, ಗೌರಿ ನಾಯ್ಕ ಅವರ ಕಾರ್ಯ ಶ್ಲಾಘಿಸಿ ಸನ್ಮಾನಿಸಿದ್ದರು. ಬಳಿಕ ವಯಸ್ಸಿನ ಕಾರಣ ಇನ್ನೂ ಬಾವಿ ತೋಡದಂತೆ ಮತ್ತು ಅದನ್ನು ಸರ್ಕಾರದಿಂದ ನಿರ್ಮಿಸಿಕೊಡುವುದಾಗಿ ತಿಳಿಸಿದ್ದರು.
ಆದರೆ, ಇದಕ್ಕೆ ಒಪ್ಪದ ಗೌರಿ ನಾಯ್ಕ, ‘ಬಾವಿ ತೋಡಿ, ಮಕ್ಕಳಿಗೆ ನೀರು ಕೊಡುವೆ’ ಎಂದರು. ಅದರಂತೆ ಅವರು ಸೋಮವಾರ ಬಾವಿ ತೋಡುವ ಕೆಲಸ ಮುಂದುವರೆಸಿದರು.
ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಅಪರ್ಣಾ ರಮೇಶ ಸೂಚನೆ ಮೇರೆಗೆ ಸಂಜೆ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಸ್ಥಳೀಯ ಹುತ್ಗಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬಂದು, ಬಾವಿಯನ್ನು ಹಲಗೆಗಳಿಂದ ಮುಚ್ಚಿದರು. ಜತೆಗೆ ಬಾವಿಯ ಸುತ್ತ ತಾತ್ಕಾಲಿಕ ಕಂಬಗಳನ್ನು ನಿಲ್ಲಿಸಿ, ಅದಕ್ಕೆ ಹಗ್ಗ ಕಟ್ಟಿದರು. ಬಾವಿಗೆ ಹೋಗುವ ದಾರಿಯಲ್ಲಿ ಗೇಟ್ ನಿರ್ಮಿಸಿ, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಗೌರಿ ನಾಯ್ಕ ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.