ADVERTISEMENT

ಮುಂಡಗೋಡ | ‘ಮಂಗನ ಕಾಯಿಲೆ ಜಾಗೃತಿ ವಹಿಸಿ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 13:32 IST
Last Updated 5 ಮಾರ್ಚ್ 2024, 13:32 IST
ಮಾರಿಕಾಂಬಾ ದೇವಾಲಯದ ಯಾತ್ರಿ ನಿವಾಸವನ್ನು ವಿದ್ಯುಕ್ತವಾಗಿ ಪೂಜಿಸುವ ಮೂಲಕ ಭಕ್ತರ ಅನುಕೂಲಕ್ಕೆ ಮುಕ್ತ ಮಾಡಲಾಯಿತು.
ಮಾರಿಕಾಂಬಾ ದೇವಾಲಯದ ಯಾತ್ರಿ ನಿವಾಸವನ್ನು ವಿದ್ಯುಕ್ತವಾಗಿ ಪೂಜಿಸುವ ಮೂಲಕ ಭಕ್ತರ ಅನುಕೂಲಕ್ಕೆ ಮುಕ್ತ ಮಾಡಲಾಯಿತು.   

ಮುಂಡಗೋಡ: ಅಕ್ಕ ಪಕ್ಕದ ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಕರಣ ವರದಿಯಾಗುತ್ತಿದ್ದು, ಜನರು ಜಾಗೃತಿಯಿಂದ ಇರುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.

ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಮನುಷ್ಯರಿಗೆ ಮಂಗನ ಕಾಯಿಲೆ ಬರುತ್ತದೆ. ಇದು ಮನುಷ್ಯರಿಂದ ನೇರವಾಗಿ ಮನುಷ್ಯರಿಗೆ ಹರಡುವದಿಲ್ಲ. ಈ ವೈರಲ್ ಜ್ವರವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಡಿನಿಂದ ತರಗೆಲೆ ತರಬಾರದು: ಜನರು ಅನವಶ್ಯಕವಾಗಿ ಕಾಡಿಗೆ ಹೋಗಬಾರದು. ಕಾಡಿನಿಂದ ಒಣ ದರಕು ಅಥವಾ ತರಗೆಲೆ ಮನೆಗೆ, ತೋಟಕ್ಕೆ ತರಬಾರದು. ಕಾಯಿಲೆಯಿಂದ ಸತ್ತ ಮಂಗಗಳಲ್ಲಿ ಇರುವ ಉಣ್ಣೆಗಳು ತರಗೆಲೆಗಳಲ್ಲಿ ಇರುತ್ತವೆ. ಮಂಗನ ಕಾಯಲೆ ಮಾರಣಾಂತಿಕ ಕಾಯಿಲೆ ಆಗಿದೆ. ಕಾಡಿಗೆ ಹೋಗಲೇಬೇಕಾದ ಸಂದರ್ಭ ಇದ್ದಲ್ಲಿ ಶೂ ಅಥವಾ ಗಂಬೂಟು ಧರಿಸುವುದು, ಮೈತುಂಬಾ ಬಟ್ಟೆ ಧರಿಸುವುದು. ಡೇಪಾ ಎಣ್ಣೆಯನ್ನು ಹಚ್ಚಿಕೊಂಡು ಹೋಗುವುದು, ಬಂದ ನಂತರ ಬಿಸಿ ನೀರು ಸ್ನಾನ ಮಾಡುವುದು. ಉಣ್ಣೆ ಹತ್ತಿಕೊಂಡಿದೆಯೋ ಎಂದು ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಸತತ ಎಂಟತ್ತು ದಿನಗಳಿಂದ ಬಿಡದೇ ಬರುವ ಜ್ವರ, ವಿಪರೀತ ತಲೆನೋವು, ಕೈ ಕಾಲು ನೋವು, ಸೊಂಟ ನೋವು, ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವ ಲಕ್ಷಣಗಳು ಕಂಡುಬರುತ್ತದೆ. ಮಂಗಗಳು ಸತ್ತಿದ್ದು ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸಲು ಅವರು ಮನವಿ ಮಾಡಿದ್ದಾರೆ.

ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಶಿರಸಿ: ನಗರದ ಗೊಲಗೇರಿ ಓಣಿಯಲ್ಲಿರುವ ಮಾರಿಕಾಂಬಾ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಯಾತ್ರಿ  ನಿವಾಸ ಕಟ್ಟಡದ ಪ್ರಾರಂಭೋತ್ಸವ ಸೋಮವಾರ ವಿದ್ಯುಕ್ತವಾಗಿ ನೆರವೇರಿತು.  ಹಲವು ವರ್ಷಗಳಿಂದ ಯಾತ್ರಿ ನಿವಾಸ ಕಟ್ಟಡ ಬಳಕೆಯಿಲ್ಲದೇ ಹಾಳು ಸುರಿಯುತ್ತಿತ್ತು. ದೇವಾಲಯದ ಆಡಳಿತ ಮಂಡಳಿಯ ನಿರಂತರ ಪ್ರಯತ್ನದ ಫಲವಾಗಿ ಪ್ರಸ್ತುತ ಮಾರಿ ಜಾತ್ರೆಗೂ ಮುನ್ನ ಭಕ್ತರ ಬಳಕೆಗೆ ಮುಕ್ತವಾಗಿದೆ. ಆರಂಭದಲ್ಲಿ ಯಾತ್ರಿ ನಿವಾಸ ಕಟ್ಟಡದಲ್ಲಿ ವಾಸ್ತು ಹವನ ಪೂಜೆ ನಡೆಸಲಾಯಿತು.  ಪೂಜಾ ಕಾ‍ರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ರವೀಂದ್ರ ನಾಯ್ಕ ಉಪಾಧ್ಯಕ್ಷ ಸುದೇಶ  ಜೋಗಳೇಕರ ಧರ್ಮದರ್ಶಿ ಸುಧೀರ್ ಹಂದ್ರಾಳ  ಶಿವಾನಂದ ಶೆಟ್ಟಿ ವತ್ಸಲಾ ಹೆಗಡೆ ಬಾಬುದಾರರಾದ ರಮೇಶ ದಬ್ಬೆ ಜಗದೀಶ ಕುರುಬರ ಬಸವರಾಜ ಚಕ್ರಸಾಲಿ ಮದನ ಆರೇರ ಬಾಬುದಾರ ಸಹಾಯಕರು ದೇವಾಲಯದ ಸಿಬ್ಬಂದಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.