ಗೋಕರ್ಣ: ಈಚೆಗೆ ಮೃತಪಟ್ಟಿದ್ದ ಹಿರೇಗುತ್ತಿಯಲ್ಲಿ ವಾಸಿಸುತ್ತಿದ್ದ ರಮೇಶ ಮಾಕತ್ಕರ್ ( 58) ಅವರ ವಾರಸುದಾರರನ್ನು ಪಾನ್ಕಾರ್ಡ್ ಮೂಲಕ ಪತ್ತೆ ಹಚ್ಚಿದ ಗೋಕರ್ಣ ಪೊಲೀಸರು ಶವವನ್ನು ಶನಿವಾರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ರಮೇಶ ಮಾಕತ್ಕರ್ ಹಿರೇಗುತ್ತಿಯಲ್ಲಿ ಟೇಲರಿಂಗ್ ಕಾರ್ಯ ಮಾಡುತ್ತಿದ್ದರು. ಬುಧವಾರ ಆರೋಗ್ಯದಲ್ಲಿ ಏರುಪೇರಾಗಿ ಕುಮಟಾಕ್ಕೆ ಕರೆದುಕೊಂಡು ಹೋಗುತ್ತಿರುವಾಗ ದಾರಿಯ ಮದ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ವಾರಸುದಾರರಾರೂ ಇರದ ಕಾರಣ ಶವವನ್ನು ಜಿಲ್ಲಾ ಶವಾಗಾರದಲ್ಲಿ ಇಡಲಾಗಿತ್ತು.
ಅವರ ಮೊಬೈಲ್ ಅಡ್ರೆಸ್, ಬ್ಯಾಂಕ್ ಪಾಸ್ ಬುಕ್ ನಲ್ಲಿ ಹಿರೇಗುತ್ತಿಯ ವಿಳಾಸವೇ ಇತ್ತು. ಇದರಿಂದ ಪೊಲೀಸರಿಗೆ ಅವರ ವಾರಸುದಾರರನ್ನು ಹುಡುಕುವುದು ಸವಾಲಿನ ಕೆಲಸವಾಗಿತ್ತು. ಆದರೆ ಮೃತರ ಪಾನ್ ಕಾರ್ಡ್ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಅದರಲ್ಲಿದ್ದ ಸಂಖ್ಯೆಯನ್ನು ಐ. ಟಿ ಇಲಾಖೆಗೆ ಕಳುಹಿಸಿ ವಿಳಾಸ ತಿಳಿಸುವಂತೆ ಮನವಿ ಮಾಡಿದ್ದರು.
ಅದರಲ್ಲಿ ಬೆಂಗಳೂರಿನ ಪೀಣ್ಯದ ವಿಳಾಸ ಪತ್ತೆಯಾಯಿತು. ಈ ವಿಳಾಸಕ್ಕೆ ಸಂಪರ್ಕಿಸಿದ ಗೋಕರ್ಣ ಪೊಲೀಸರು ಅವರ ಹೆಂಡತಿ ಮತ್ತು ಮಕ್ಕಳಿಗೆ ರಮೇಶ ಮೃತಪಟ್ಟ ಸುದ್ದಿ ತಿಳಿಸಿದ್ದಾರೆ. ಈ ಮಧ್ಯೆ ರಮೇಶ ಮಾಕತ್ಕರ್ ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯೋಗ ನಡೆಸುತ್ತಿದ್ದರು. ಅಲ್ಲಿ ನಷ್ಟವಾಗಿ 10 ವರ್ಷದ ಹಿಂದೆ ಮನೆ ಬಿಟ್ಟು ಬಂದಿದ್ದರು. ಹೆಂಡತಿ ಮಕ್ಕಳು ಎಷ್ಟು ಹುಡುಕಿದರೂ ಪತ್ತೆಮಾಡಲು ಸಾಧ್ಯವಾಗಿಲ್ಲವಾಗಿತ್ತು. ಇವರ ಬಗ್ಗೆ ಮಾಹಿತಿ ತಿಳಿದ ಹೆಂಡತಿ, ಮಕ್ಕಳು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿ, ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.