ಭಟ್ಕಳ: ತಾಲ್ಲೂಕಿನ ಬಸ್ತಿ ಕಾಯ್ಕಿಣಿಯಲ್ಲಿ ಜಾಲಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರ ಸಂಘದ 6ನೇಯ ಶಾಖೆಯನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಸಂಸ್ಥೆಯ ಶಿಸ್ತುಬದ್ದ ವ್ಯವಹಾರದಿಂದಾಗಿ ಜನಮನ್ನಣೆಗಳಿಸಿ ಎರಡು ಸ್ವಂತ ಕಟ್ಟಡ ಹಾಗೂ ₹25 ಕೋಟಿ ಸ್ವಂತ ಬಂಡವಾಳ ಕೂಡಿಡುವಲ್ಲಿ ಸಫಲವಾಗಿದೆ. ಗ್ರಾಮೀಣ ಭಾಗದ ಜನರಿಗೆ ತನ್ನ ಸೇವೆಯನ್ನು ವಿಸ್ತರಿಸುವ ಅಭಿಲಾಷೆಯಿಂದ ಬಸ್ತಿ ಕಾಯ್ಕಿಣಿಯಲ್ಲಿ ಶಾಖೆ ತೆರೆದಿದೆ. ಈ ಭಾಗದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ಸಂಘದ ಅಧ್ಯಕ್ಷ ಮಂಜಪ್ಪ ನಾಯ್ಕ ಸಂಘದ ನಡೆದು ಬಂದ ಹಾದಿ, ಪ್ರಗತಿಯ ಬಗ್ಗೆ ತಿಳಿಸಿ ಸಂಘದ ಸರ್ವತೋಮುಖ ಅಭಿವೃದ್ದಿಗೆ ಗ್ರಾಹಕರ ಸಹಕಾರ ಕೋರಿದರು. ಸಂಸ್ಥಾಪಕ ಅಧ್ಯಕ್ಷ ಡಿ.ಬಿ ನಾಯ್ಕ ಮಾತನಾಡಿದರು.
ಉಪಾಧ್ಯಕ್ಷ ರತ್ನಾಕರ ಖಾರ್ವಿ, ನಿರ್ದೇಶಕರಾದ ರವಿ ನಾಯ್ಕ ಜಾಲಿ, ರಾಮಾ ಮೊಗೇರ, ಬೈರಪ್ಪ ನಾಯ್ಕ, ಕೃಷ್ಣಕುಮಾರ ಜಾಲಿ, ವಸಂತ ನಾಯ್ಕ, ರಾಜು ಗೊಂಡ, ಮೋಹಿನಿ ನಾಯ್ಕ, ಅನ್ನಪೂರ್ಣ ನಾಯ್ಕ, ಪ್ರಧಾನ ವ್ಯವಸ್ಥಾಪಕ ಕೃಷ್ಣ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.