ಹರಪನಹಳ್ಳಿ: ಅನಾಮಧೇಯ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಆಸ್ಪತ್ರೆಗಳಿಗೆ ಗುರುವಾರ ಭೇಟಿ ಕೊಟ್ಟಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಅವೈಜ್ಞಾನಿಕ ಎರಡು ಸ್ಕ್ಯಾನಿಂಗ್ ಘಟಕ ಮುಟ್ಟುಗೋಲು ಮಾಡಲು ಸೂಚಿಸಿ, ಇಬ್ಬರು ಖಾಸಗಿ ವೈಧ್ಯರ ವಿರುದ್ದ ಖಾಸಗಿ ದೂರು ದಾಖಲಿಸಲು ಆದೇಶಿಸಿದರು.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ.ಎಸ್.ಎನ್.ಮಹೇಶ್ ಮಾಲೀಕತ್ವದ ಮಹೇಶ್ ನರ್ಸಿಂಗ್ ಹೋಂ ಮತ್ತು ಡಾ.ಕಿಶನ್ ಭಾಗವತ್ ಅವರ ಆಯುಷ್ ಡಯೊಗ್ನಸ್ಟಿಕ್ ಘಟಕಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಈ ಎರಡೂ ಘಟಕಗಳ ಮಾಲೀಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿ, ಖಾಸಗಿ ದೂರು ದಾಖಲಿಸುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಹಾಲಸ್ವಾಮಿ ಅವರಿಗೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆ 100 ಮೀಟರ್ ಒಳಗೆ ಇರುವ ರಕ್ತ ತಪಾಸಣೆ ಕೇಂದ್ರಗಳು, ಆಸ್ಪತ್ರೆಯಲ್ಲಿ ಲಂಚ ಕೇಳುತ್ತಾರೆ ಎಂದು ಸಾರ್ವಜನಿಕರು ದೂರಿದ್ದರಿಂದ, ಕಾಯ್ದೆ ಅನ್ವಯ ಪರಿಶೀಲಿಸಲು ಸೂಚಿಸಿದರು.
ಆಸ್ಪತ್ರೆಯಲ್ಲಿ ಸೂಚನಾ ಫಲಕದಲ್ಲಿ ನೀಲಿ ಫಲಕ. ಹೊರಾಂಗಣದಲ್ಲಿ ಸಿ.ಸಿ.ಟಿ.ವಿ.ಕ್ಯಾಮೆರಾ ಪ್ರದರ್ಶನ, ನಿತ್ಯದ ಸ್ಕ್ಯಾನಿಂಗ್ ವಿವರಗಳನ್ನು ದಾಖಲೆ ಮಾಡದಿರುವುದರ ಬಗ್ಗೆ ಆಯೋಗದ ಸದಸ್ಯರು ಪ್ರಶ್ನಿಸಿದರು. ಅವುಗಳಿಗೆ ಅಸಮರ್ಪಕ ಉತ್ತರ ನೀಡಿದ ಡಾ.ಮಹೇಶ್ ಎಸ್.ಎನ್. ಅವರಿಗೆ ನೋಟಸ್ ಜಾರಿಗೊಳಿಸಿದರು. ಇದೇ ರೀತಿ ಎಷ್ಟು ವರ್ಷದಿಂದ ನಡೆಸುತ್ತಿದ್ದೀರಿ? ನಿಮ್ಮ ವಿರುದ್ದ ಪಿಸಿಆರ್ ಏಕೆ ದಾಖಲಿಸಬಾರದು ಎಂದು ಗದರಿದರು. ಆಧಾರ್ ಕಾರ್ಡು ಬದಲಿಗೆ ಜನನ ಪ್ರಮಾಣ ಪತ್ರ ಅಥವಾ ವೈದ್ಯಕೀಯ ದೃಢೀಕರಣ ಪಡೆದು ಸ್ಕ್ಯಾನಿಂಗ್ ಪಡೆಯಬೇಕು ಎಂದು ಆದೇಶಿಸಿದರು. ಆಸ್ಪತ್ರೆಯಲ್ಲಿದ್ದ ಸ್ಕ್ಯಾನಿಂಗ್ ಕೇಂದ್ರಕ್ಕೆ ಸಂಬಂಧ ರಸೀದಿ ಪುಸ್ತಕ, ದಾಖಲಾತಿ, ಒಬಿಜಿ ಕಡತಗಳನ್ನು ವಶಕ್ಕೆ ಪಡೆದುಕೊಂಡು ತೆರಳಿದರು. ಅಲ್ಲಿಂದ ಸರ್ಕಾರಿ ಆಸ್ಪತ್ರೆಯ ಮಕ್ಕಳ ಪೌಷ್ಟಿಕ ಪುನಶ್ಚೇತನ ಘಟಕ, ಐಸಿಯು ಕೊಠಡಿಗಳನ್ನು ಪರಿಶೀಲಿಸಿ, ವೈಧ್ಯರಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಶಿಧರ ಕೋಸಂಬೆ, ‘ಕಳೆದ ಬಾರಿಯ ಭೇಟಿ ವೇಳೆಗೆ ಹೋಲಿಸಿದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ 5 ಮಕ್ಕಳಲ್ಲಿ ಡೆಂಗಿ ಶಂಕಿಸಲಾಗಿದ್ದು, ಇಬ್ಬರಿಗೆ ಡೆಂಗಿ ದೃಢಪಟ್ಟಿದೆ. ವೈದ್ಯರ ತಂಡ ರಚಿಸಿಕೊಂಡು ಎಲ್ಲ ವಸತಿ ಶಾಲೆಗಳ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿರುವೆ’ ಎಂದರು.
‘ನಗರದ ಎರಡು ಖಾಸಗಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಸೂಕ್ತ ಸ್ಥಳಗಳಲ್ಲಿ ಹಾಕಿಲ್ಲ. ಸ್ಕ್ಯಾನಿಂಗ್ ಸೆಂಟರ್ ನಲ್ಲಿ ರೋಗಿಗಳ ಖಾಸಗಿತನ ಚಿತ್ರೀಕರಣ ಮಾಡುವ ರೀತಿಯಲ್ಲಿ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ. ಒಟ್ಟಾರೆ ಎಲ್ಲ ಆಯಾಮಗಳಲ್ಲಿ ಘಟಕಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ಕಾಯ್ದೆ ಸಂಪೂರ್ಣ ಉಲ್ಲಂಘನೆಯಾಗಿದೆ. ಹಾಗಾಗಿ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲು ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.
ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸದೇ ನಿರ್ಲಕ್ಷ್ಯವಹಿಸಿರುವ ತಾಲ್ಲೂಕು ವೈಧ್ಯಾಧಿಕಾರಿ ಡಾ.ಹಾಲಸ್ವಾಮಿಗೂ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ಒತ್ತಾಯಿಸುತ್ತೇನೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ಸುದೀಪ್, ವಿಷಯ ನಿರ್ವಾಹಕ ಧರ್ಮನಗೌಡ, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಂಕರ ನಾಯ್ಕ, ಡಾ.ದತ್ತಾತ್ರೇಯ, ಶರಣಪ್ಪ, ವೆಂಕಟೇಶ ಬಾಗಲಾರ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.