ಕೊಟ್ಟೂರು: ‘ಬೀಜ ರಸಗೊಬ್ಬರ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಪರವಾನಿಗೆಯನ್ನು ರದ್ದುಪಡಿಸಲಾಗುವುದು’ ಎಂದು ತಹಶೀಲ್ದಾರ್ ಜಿ.ಕೆ.ಅಮರೀಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಮಾರಾಟಗಾರರ ಹಾಗೂ ರೈತ ಸಂಘದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಟಿ. ಸುನಿಲ್ ಕುಮಾರ್ ಮಾತನಾಡಿ, ರೈತರು ಯಾವುದೇ ಒಂದು ಕಂಪನಿ ಹೆಸರಿನ ಬೀಜ ರಸಗೊಬ್ಬರಗಳ ಮೇಲೆ ಅವಲಂಬಿಸದೆ ಇತರೆ ಕಂಪನಿಗಳ ಬೀಜ ರಸಗೊಬ್ಬರಗಳನ್ನು ಸಹ ಬಳಸುವಂತೆ ಸಲಹೆ ನೀಡಿದರು.
ಸಿಪಿಐ ವೆಂಕಟಸ್ವಾಮಿ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಮಾರಾಟಗಾರರು ಬೀಜ ಅಥವಾ ಗೊಬ್ಬರಗಳನ್ನು ಮಾರಾಟ ಮಾಡಲು ಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ನಿಯಮಾನುಸಾರ ಪರಿಶೀಲಿಸಿ ರೈತರಿಗಾಗುವ ತೊಂದರೆ ತಪ್ಪಿಸಲು ಸಹಾಯವಾಗುತ್ತದೆ’ ಎಂದರು.
ತೋಟಗಾರಿಕೆ ಇಲಾಖೆ ಡಿ.ಅಶ್ವಿನಿ, ಕೃಷಿ ಇಲಾಖೆ ನೀಲಾನಾಯ್ಕ, ಕೆ. ಕುಮಾರಸ್ವಾಮಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರ್ ಎಸ್ ಒಡೆಯರ್ ಮುಖಂಡರಾದ ರಾಮಪ್ಪ, ಜಯಪ್ರಕಾಶನಾಯ್ಕ, ಸುರೇಶನಾಯ್ಕ, ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರಶೆಟ್ಟಿ ಹಾಗೂ ಮಾರಾಟಗಾರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.