ಹರಪನಹಳ್ಳಿ: ತಾಲ್ಲೂಕಿನ ಎಲ್ಲೆಡೆ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆ ಸುರಿದಿರುವ ಖುಷಿಯಲ್ಲಿ ಬಿತ್ತನೆಗೆ ಜಮೀನು ಹದಗೊಳಿಸುವ ಚಟುವಟಿಕೆ ಭರದಿಂದ ಸಾಗಿದೆ.
ಮುಂಗಾರಿನಲ್ಲಿ 87,396 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ನೀರಾವರಿ 11500 ಹೆಕ್ಟರ್ ಪ್ರದೇಶವಿದೆ. ಮಳೆ ಅವಲಂಬಿಸಿದ 71,645 ಹೆಕ್ಟರ್ ಭೂಮಿಯಲ್ಲಿ ಮೆಕ್ಕೆಜೋಳ, ಶೇಂಗಾ 1,800 ಹೆಕ್ಟರ್, ಊಟದ ಜೋಳ 500 ಹೆಕ್ಟರ್, ರಾಗಿ 3,500 ಹೆಕ್ಟರ್, ಈರುಳ್ಳಿ 3,500 ಹೆಕ್ಟರ್, ಉಳಿದಂತೆ ಹೂವು, ಸೂರ್ಯಕಾಂತಿ, ಈರುಳ್ಳಿ, ತೊಗರಿ, ಗುರಾಳು, ನವಣೆ ಧಾನ್ಯಗಳನ್ನು ಬಿತ್ತನೆ ಮಾಡಲಾಗುತ್ತದೆ.
ಪ್ರಸಕ್ತ ವರ್ಷ ಹವಾಮಾನ ಇಲಾಖೆಯ ವರದಿ ಪ್ರಕಾರ ಉತ್ತಮ ಮಳೆ ಬರುವ ನಿರೀಕ್ಷೆಯಿದೆ. ಮುಂಗಾರು ಪೂರ್ವದಲ್ಲಿಯೇ ಮೇ 15ಕ್ಕೆ ಹರಪನಹಳ್ಳಿ ಕಸಾಬ ಹೋಬಳಿ 20.7 ಮಿ.ಮೀ, ಅರಸೀಕೆರೆ 34.7 ಮಿ.ಮೀ, ಚಿಗಟೇರಿ 47.8 ಮಿ.ಮೀ ಹಾಗೂ ತೆಲಿಗಿ 56.5 ಮಿ.ಮೀ. ಮಳೆ ಸುರಿದಿದ್ದು, ವಾಡಿಕೆಗಿಂತ ಸರಾಸರಿ 25 ಮಿ.ಮೀ.ನಷ್ಟು ಮಳೆ ಕೊರತೆಯಾಗಿದ್ದರೂ, ಬಿತ್ತನೆಗೆ ಅನುಕೂಲವಿದೆ.
ಮೇ ಅಂತ್ಯದಿಂದ ಜೂನ್ 30ರವರೆಗೂ ಬಿತ್ತನೆ ಕಾರ್ಯ ಚುರುಕಾಗಲಿದೆ. ತಾಲ್ಲೂಕಿನಲ್ಲಿ ಬಿತ್ತನೆಗೆ ಬೇಕಾದಷ್ಟು ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಪ್ರಕ್ರಿಯೆ ಸರ್ಕಾರಿ ಮತ್ತು ಖಾಸಗಿ ಅಂಗಡಿಗಳಿಂದ ರೈತರು ಖರೀದಿಸುತ್ತಿದ್ದಾರೆ.
ಕೃಷಿ ಇಲಾಖೆಯು ಹರಪನಹಳ್ಳಿ, ಚಿಗಟೇರಿ, ಸಾಸ್ವಿಹಳ್ಳಿ, ಅರಸೀಕೆರೆ, ತೆಲಿಗಿ, ಹಲುವಾಗಲು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭ್ಯವಿರಿಸಿದೆ. ರೈತರು ಯಾವುದೇ ಅಧಿಕೃತ ಅಂಗಡಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಖರೀದಿಸಿ, ಅದರ ರಸೀದಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಖಾಸಗಿ ದೊರಕುವ ಬಿತ್ತನೆ ಬೀಜಗಳನ್ನು ಖರೀದಿಸಬಾರದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ತಿಳಿಸಿದರು.
ರಸಗೊಬ್ಬರ ಕೊರತೆ ಇಲ್ಲ
‘ಜೂನ್ ತಿಂಗಳಿನಿಂದ ಸೆಪ್ಟಂಬರ್ವರೆಗೂ ಜಿಂಕ್ ಜಿಪ್ಸ್ಂ ಬೋರಾನ್ 25165 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಆ ಪೈಕಿ ಯುರಿಯಾ 6965 ಮೆಟ್ರಿಕ್ ಟನ್ ಡಿಎಪಿ 6040 ಮೆಟ್ರಿಕ್ ಟನ್ ಎಂಒಪಿ 1060 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ 10400 ಮೆಟ್ರಿಕ್ ಟನ್ 700 ಮೆಟ್ರಿಕ್ ಟನ್ ಅವಶ್ಯಕತೆ ಇದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.