ಹೊಸಪೇಟೆ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಪ್ರಯುಕ್ತ ಇಲ್ಲಿನ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಭಾನುವಾರ ನಗರದ ಉತ್ತರಾದಿ ಮಠಕ್ಕೆ ದಲಿತರ ಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಿದ ಹೋರಾಟ ಸಮಿತಿಯ ಸಂಚಾಲಕ ಎ.ಕರುಣಾನಿಧಿ, ಸಿಪಿಎಂ ಮುಖಂಡರಾದ ಮರಡಿ ಜಂಬಯ್ಯ ನಾಯಕ, ಭಾಸ್ಕರ ರೆಡ್ಡಿ ಇತರರು ಮೆರವಣಿಗೆ ಮೂಲಕ ರೈಲ್ವೆ ನಿಲ್ದಾಣ ರಸ್ತೆಯ ಉತ್ತರಾದಿ ಮಠಕ್ಕೆ ಬಂದರು. ಮಠದೊಳಗೆ ಪ್ರವೇಶಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
‘ಅಂಬೇಡ್ಕರ್ ಜಯಂತಿಯನ್ನು ಸಾಮಾಜಿಕ ಸೌಹಾರ್ದ ಮತ್ತು ಸಹೋದರತ್ವ ಸಂದೇಶ ಸಾರುವುದೇ ಈ ಕಾರ್ಯಕ್ರಮ ಉದ್ದೇಶ. ಬದಲಾಗಬೇಕಾಗಿರುವುದು ಸಂವಿಧಾನವಲ್ಲ, ಬದಲಿಗೆ ನಮ್ಮ ಮನಸ್ಸು. ಜನರಿಗೆ ಇದರ ಬಗ್ಗೆ ಮನವರಿಕೆ ಮಾಡುವ ಅಗತ್ಯ ಇದೆ’ ಎಂದು ಎ.ಕರುಣಾನಿಧಿ ಹೇಳಿದರು.
ಜಂಬಯ್ಯ ನಾಯಕ ಮಾತನಾಡಿ, ‘ಯಾವುದೇ ಧರ್ಮ ಅಸಮಾನತೆಯನ್ನು ಒಪ್ಪುವುದಿಲ್ಲ. ಯಾರೋ ಕೆಲವರು ಸಮಾಜದಲ್ಲಿ ಮೇಲು, ಕೀಳು ಎಂಬ ವ್ಯವಸ್ಥೆ ಸೃಷ್ಟಿಸಿದ್ದಾರೆ. ಜನಸಾಮಾನ್ಯರು ಸೌಹಾರ್ದದಿಂದ ಬಾಳ್ವೆ ನಡಸುತ್ತಿದ್ದರೂ, ರಾಜಕೀಯ ಶಕ್ತಿಗಳು ಜನರ ನಡುವಿನ ಒಗ್ಗಟ್ಟು ಮುರಿಯಲು ಯತ್ನಿಸುತ್ತಿವೆ. ನಾವೆಲ್ಲ ಒಂದಾಗಿದ್ದೇವೆ, ನಮ್ಮೊಳಗೆ ಭೇದ ಭಾವ ಇಲ್ಲ ಎಂಬುದನ್ನು ಸಮಾಜಕ್ಕೆ ತೋರಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಮಠದ ಪರವಾಗಿ ಮಾತನಾಡಿದ ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್ ಭಟ್, ಬ್ರಾಹ್ಮಣ ಸಮಾಜ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ, ಮಠದೊಳಗೆ ಪ್ರವೇಶಕ್ಕೆ ಯಾವ ಅಡ್ಡಿಯೂ ಇಲ್ಲ. ಮುಂದೆಯೂ ಇದೇ ಪರಂಪರೆ ಮುಂದುವರಿಯಲಿದೆ ಎಂದರು.
ಬಳಿಕ ಮಠದಲ್ಲಿನ ಜಯತೀರ್ಥರು, ರಾಘವೇಂದ್ರ ಯತಿಗಳು, ಸತ್ಯಪ್ರಮೋದ ತೀರ್ಥರ ಮೃತ್ತಿಕಾ ಬೃಂದಾವನಕ್ಕೆ ಆರತಿ ಬೆಳಕಿ ಬಂದವರಿಗೆಲ್ಲ ತೀರ್ಥ, ಮಂತ್ರಾಕ್ಷತೆ, ಫಲ ಪ್ರಸಾದ ನೀಡಲಾಯಿತು.
ಉತ್ತರಾದಿ ಮಠದ ಉಮರ್ಜಿ ರಾಮಾಚಾರ್ಯ, ಆನಂದಾಚಾರ್ಯ ಮಹಿಷಿ, ಅರ್ಚಕ ಹಾಗೂ ವ್ಯವಸ್ಥಾಪಕ ಕೃಷ್ಣಾಚಾರ್ಯ, ರಮೇಶ್ ನವರತ್ನ, ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಕಂಡಕ್ಟರ್ ಪಂಪಾಪತಿ, ಎನ್.ಯಲ್ಲಾಲಿಂಗ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.