ಹೊಸಪೇಟೆ (ವಿಜಯನಗರ): ‘ಸಂಡೂರು ತಾಲ್ಲೂಕಿನ ದೇವದಾರಿಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾಧಿಕಾರಿ ಅವರಿಂದ ವರದಿ ಕೇಳಿದ್ದೇನೆ. ಅದು ಬಂದ ಬಳಿಕ ಸರ್ಕಾರದ ನಿಲುವನ್ನು ತಿಳಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿಜಯನಗರ ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಈ ಸಲದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆಯ ಸ್ಥಾನ 10 ರಿಂದ 27ನೇ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಯುವರಾಜ ನಾಯ್ಕ್ ಅವರನ್ನು ಅಮಾನತು ಮಾಡಲು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ. ಜತೆಗೆ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಎಲ್ಲಾ ಬಿಇಒಗಳಿಗೆ ನೋಟಿಸ್ ನೀಡಲು ತಿಳಿಸಿದ್ದೇನೆ’ ಎಂದರು.
‘ಡಿಎಂಎಫ್ ನಿಧಿಯನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ನಡುವೆ ಹಂಚುವ ವಿಚಾರದಲ್ಲಿ ಗೊಂದಲ ಇರುವುದು ನಿಜ. ಶೇ 28ರಷ್ಟು ಪಾಲಿನ ರೂಪದಲ್ಲಿ ₹218 ಕೋಟಿ ವಿಜಯನಗರ ಜಿಲ್ಲೆಗೆ ಸಂದಾಯವಾಗಬೇಕು. ಅಧಿಕಾರಿಗಳ ಜತೆಗೆ ಕುಳಿತು ಚರ್ಚಿಸಿ ಗೊಂದಲ ಬಗೆಹರಿಸಲಾಗುವುದು. ಈ ನಿಟ್ಟಿನಲ್ಲಿ ಪತ್ರ ಬರೆದಿರುವ ಸಂಸದ ಇ.ತುಕಾರಾಂ ಅವರೊಂದಿಗೂ ಮಾತನಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.