ADVERTISEMENT

ವಿಜಯನಗರ | ಸೈಕಲ್ ಏರಿ ಜಿಲ್ಲಾಧಿಕಾರಿ ಸವಾರಿ

ಜನಸ್ಪಂದನ: ಸಾರ್ವಜನಿಕರ ಸಮಸ್ಯೆ ಆಲಿಸಿದ ಎಂ.ಎಸ್. ದಿವಾಕರ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:40 IST
Last Updated 26 ಜೂನ್ 2024, 15:40 IST
ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೂ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಸೈಕಲ್‌ನಲ್ಲಿ ರಾಜೀವ್ ಗಾಂಧಿ ನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು
ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೂ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಸೈಕಲ್‌ನಲ್ಲಿ ರಾಜೀವ್ ಗಾಂಧಿ ನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು   

ಕೂಡ್ಲಿಗಿ: ಪಟ್ಟಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಬರುವಾಗ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಸೈಕಲ್ ಸವಾರಿ ಮಾಡುತ್ತ ಪಟ್ಟಣ ಪ್ರದಕ್ಷಿಣೆ ಹಾಕಿದರು.

ಪಟ್ಟಣ ಪ್ರವೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಸೈಕಲ್ ಏರಿದ ಅವರು ನೇರವಾಗಿ ರಾಜೀವ್ ಗಾಂಧಿ ನಗರ ಪ್ರವೇಶಿಸಿದರು. ಈ ವೇಳೆ ಅಲ್ಲಿನ ಜನರು, ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛ ಮಾಡುತ್ತಿಲ್ಲ. ರಸ್ತೆಗಳು ಹದಗೆಟ್ಟು ಹೋಗಿವೆ ಎಂದು ದೂರಿದರು.

ಚರಂಡಿ ಸ್ವಚ್ಛ ಮಾಡಿಸಿ, ರಸ್ತೆಗಳನ್ನು ದುರಸ್ತಿ ಮಾಡಿಸುವಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ADVERTISEMENT

ನಂತರ ಪಕ್ಕದಲ್ಲಿದ್ದ ಸ್ಮಶಾನ ಪರಿಶೀಲಿಸಿ, ದ್ವಾರ ಬಾಗಿಲಿಗೆ ಬಣ್ಣ ಬಳಿಸಿ, ಆಸನಗಳನ್ನು ಅಳವಡಿಸಲು ಹಾಗೂ ಇನ್ನೂ ಹೆಚ್ಚಿನ ಗಿಡಗಳನ್ನು ನೆಡುವಂತೆ ಸೂಚನೆ ನೀಡಿದರು. ಶಾಸಕ ಶ್ರೀನಿವಾಸ್ ಎನ್.ಟಿ. ಜೊತೆಗಿದ್ದರು. ತಾಲ್ಲೂಕು ಕಚೇರಿಗೆ ಬಂದು ಉಪ ನೋಂದಣಿ, ಭೂಮಾಪನ ಕಚೇರಿಗಳ ವೀಕ್ಷಿಸಿ, ಮಹಾದೇವ ಮೈಲಾರ ಕ್ರೀಡಾಂಗಣಕ್ಕೆ ಭೇಟಿ ನೀಡಿದರು.

ಸಾರ್ವಜನಿಕ ಆಸ್ಪತ್ರೆಗೆ ಬಂದ ಶಾಸಕ ಹಾಗೂ ಜಿಲ್ಲಾಧಿಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳ ಬಗ್ಗೆ ವೈದ್ಯಾಧಿಕಾರಿ ಮಧು ಅವರಿಂದ ಮಾಹಿತಿ ಪಡೆದರು. ‘₹30 ಲಕ್ಷ ಅನುದಾನದಲ್ಲಿ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಈ ವಿಷಯ ಶಾಸಕರ ಗನಮಕ್ಕೂ ಇಲ್ಲ, ನಮ್ಮ ಗಮನಕ್ಕೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‍ಎವಿಟಿ ಪ್ರಥಮ ದರ್ಜೆ ಕಾಲೇಜಿನ ನಿರ್ಮಾಣ ಹಂತದಲ್ಲಿದ್ದ ತರಗತಿ ಕೊಠಡಿಗಳನ್ನು ಪರಿಶೀಲಿಸಿ, ನಾಲ್ಕು ವರ್ಷಗಳಿಂದ ನಿರ್ಮಾಣ ಮುಗಿಸದೇ ಇರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಕರಾರು ಕಾರಣದಿಂದ ಕಾಲೇಜು ಕಾಂಪೌಂಡ್ ನಿರ್ಮಾಣ ನನೆಗುದಿಗೆ ಬಿದ್ದಿರುವ ವಿಷಯ ತಿಳಿದ ಜಿಲ್ಲಾಧಿಕಾರಿಗಳು, ಸೂಕ್ತ ಭದ್ರತೆ ನೀಡುವಂತೆ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಅವರಿಗೆ ತಿಳಿಸಿ ಕೌಂಪೌಂಡ್ ನಿರ್ಮಾಣಕ್ಕೆ ತಕ್ಷಣವೇ ಚಾಲನೆ ಕೊಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.