ಹಗರಿಬೊಮ್ಮನಹಳ್ಳಿ: ‘ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದ ₹187 ಕೋಟಿ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಬೆಣ್ಣೆಕಲ್ಲು ಪ್ರಕಾಶ್ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಈ ಹಗರಣದಲ್ಲಿ ಅಭಿವೃದ್ಧಿ ನಿಗಮದ ಕಚೇರಿಯ ಅಧಿಕಾರಿಯೊಬ್ಬರು ಮೇಲಧಿಕಾರಿಗಳ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರಿಗೆ ದೊರೆಯಬೇಕಾದ ಅನುದಾನ ಬೇರೆ ಯಾರದೋ ಪಾಲಾಗಿದೆ, ಇದರಲ್ಲಿ ರಾಜ್ಯ ಸರ್ಕಾರ ನೇರ ಭಾಗಿಯಾಗಿದೆ’ ಎಂದು ಆರೋಪಿಸಿದರು.
‘ಹೊಸಪೇಟೆಯಲ್ಲಿ ಜೂನ್ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನಿಂದ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದರು.
ಎಸ್ಟಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಕಮಟಗಿ, ಯುವ ಮೋರ್ಚಾದ ಅಧ್ಯಕ್ಷ ದಿವಾಕರ ಗೌಡ, ಒಬಿಸಿ ಮೋರ್ಚಾದ ಕರಿಬಸಪ್ಪ, ಎಸ್ಸಿ ಮೋರ್ಚಾದ ಮರಿಯಪ್ಪ, ಕೃಷ್ಣ, ನರೇಗಲ್ ಕೊಟ್ರೇಶ್, ಕೋಗಳಿ ಹನುಮಂತ, ಕೆ.ಉಮೇಶ್, ಯುವರಾಜ್ ಗಡ್ಡಿ, ಸಂದೀಪ್ ಕಡ್ಲಬಾಳು, ಟಿ.ಮಹೇಂದ್ರ, ನೀಲಪ್ಪ, ಉದಯಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.