ADVERTISEMENT

ತುಂಗಭದ್ರೆ ಒಡಲಿನ ಜನರಿಗಿಲ್ಲ ನೀರು

ಕುಡಿಯುವ ನೀರಿಗಾಗಿ ಮರಿಯಮ್ಮನಹಳ್ಳಿ ಜನತೆ ಪರದಾಟ: 7 ದಶಕಗಳಿಂದ ತೀರದ ಬವಣೆ

ಎಚ್.ಎಸ್.ಶ್ರೀಹರಪ್ರಸಾದ್
Published 11 ಮಾರ್ಚ್ 2024, 5:13 IST
Last Updated 11 ಮಾರ್ಚ್ 2024, 5:13 IST
ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟೆ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದ ಮಧ್ಯದಲ್ಲಿ ನಿರ್ಮಿಸಿದ ಪಾವಗಡ ಕುಡಿಯುವ ನೀರಿನ ಯೋಜನೆಯ ನಿರ್ದೇಶಿತ ಸ್ಥಳದ ಕಟ್ಟಡ
ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟೆ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದ ಮಧ್ಯದಲ್ಲಿ ನಿರ್ಮಿಸಿದ ಪಾವಗಡ ಕುಡಿಯುವ ನೀರಿನ ಯೋಜನೆಯ ನಿರ್ದೇಶಿತ ಸ್ಥಳದ ಕಟ್ಟಡ   

ಮರಿಯಮ್ಮನಹಳ್ಳಿ: ಪಕ್ಕದಲ್ಲೇ ತುಂಗಭದ್ರೆಯ ಒಡಲಿನಲ್ಲಿ ನೀರಿದ್ದರೂ ಕುಡಿಯಲು ಮಾತ್ರ ದೊರಕದಂತಹ ಪರಿಸ್ಥಿತಿ ಮರಿಯಮ್ಮನಹಳ್ಳಿ ಪಟ್ಟಣದ ಜನರದ್ದು. ಅಲ್ಲದೆ, ಇದು ಏಳು ದಶಕದ ದಾಹ ತೀರದ ಬವಣೆಯೂ ಆಗಿದೆ.

ಜಲಾಶಯ ತುಂಬಿದಾಗ, ಅದರ ಹಿನ್ನೀರು ಮರಿಯಮ್ಮನಹಳ್ಳಿಯ ಸಮೀಪವೇ ಬಂದಿರುತ್ತದೆ. ಆದರೆ ವಾಸ್ತವ ಸ್ಥಿತಿ ಬೇರೆಯದ್ದೇ ಆಗಿರುತ್ತದೆ. ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲ. ದೂರದಲ್ಲಿ ಕಾಣಿಸುವ ಜಲಾಶಯ ನೋಡಿ ಕಣ್ಣೀರು ಸುರಿಸುವ ಸ್ಥಿತಿ ಇಲ್ಲಿನ ಜನರದ್ದಾಗಿದೆ.

1953ರಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರಿಗಾಗಿ ಸರ್ವವನ್ನೂ ತ್ಯಾಗ ಮಾಡಿದ ಪಟ್ಟಣದ ಜನತೆಗೆ ಈವರೆಗೂ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 2011ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಿದರೂ, ಜನಸಂಖ್ಯೆಗೆ ತಕ್ಕಂತೆ ಸಿಗುತ್ತಿಲ್ಲ.

ADVERTISEMENT

2022ರಲ್ಲಿ ಆರಂಭವಾದ ಪಾವಗಡ ಕುಡಿಯುವ ನೀರಿನ ಯೋಜನೆಯ ಪೈಪ್‍ಲೈನ್ ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದಾದರೂ, ಇದು ಆಗದ ಕಾರಣ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೆ ಆಗ್ರಹಿಸಿದ್ದರು. ಇದಕ್ಕಾಗಿ ಪಕ್ಷಾತೀತವಾಗಿ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ರಚಿಸಿಕೊಂಡು, ಹೋರಾಟ ಮಾಡುತ್ತಾ ಬಂದರು. ಈ ಮಧ್ಯೆ ರಾಜಕೀಯ ತಿರುವು ಪಡೆದುಕೊಂಡ ಕುಡಿಯುವ ನೀರಿನ ವಿಚಾರ ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ ಹಾಗೂ ಶಾಸಕ ಕೆ.ನೇಮಿರಾಜನಾಯ್ಕ ಅವರ ನಡುವೆ ರಾಜಕೀಯ ಮೇಲಾಟಕ್ಕೆ ಅಂದು ಕಾರಣವಾಗಿತ್ತು.

ಈ ಬಗ್ಗೆ ವೈ.ಎಂ.ಸತೀಶ್ ರೆಡ್ಡಿ ಅವರು ಸದನದಲ್ಲಿ ಧ್ವನಿ ಎತ್ತಿದ್ದರು. ಇನ್ನು ಹೋರಾಟ ಸಮಿತಿಯವರು ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ 2022ರ ಅಕ್ಟೋಬರ್ 10ರಂದು ಪಟ್ಟಣ ಬಂದ್ ಮಾಡಿ ರಾಜ್ಯದ ಗಮನ ಸೆಳೆದಿದ್ದರು.

ಆ ಸಂದರ್ಭದಲ್ಲಿಯೇ ಶಾಶ್ವತ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಅಮೃತ್ 2.0 ಯೋಜನೆಯಡಿ ₹77.77 ಕೋಟಿ ಪ್ರತ್ಯೇಕ ಯೋಜನೆಗೆ ತಾಂತ್ರಿಕ ಒಪ್ಪಿಗೆ ನೀಡಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆ ಹಾಗೂ ಟೆಂಡರ್ ಪ್ರಕ್ರಿಯೆಯಿಂದಾಗಿ ತಡವಾಗಿತ್ತು.

ಕೆ.ನೇಮರಾಜ ನಾಯ್ಕ
ಗೋವಿಂದರ ಪರಶುರಾಮ
ಸಿ.ಸತೀಶ್
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಜನರು ಕೊಡಗಳನ್ನು ಸಾಲಾಗಿಟ್ಟಿರುವುದು
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್‌ ಮುಂದೆ ಜನರು ಕೊಡಗಳನ್ನು ಹಿಡಿದು ನಿಂತಿರುವುದು
ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಕಂಡು ಬರುವ ದೃಶ್ಯ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಒತ್ತಾಯಿಸಿ ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ ಪ್ರತ್ಯೇಕ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಸಿದ್ದೇವೆ
ಕೆ.ನೇಮರಾಜನಾಯ್ಕ ಶಾಸಕ
ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೆ ಚಾಲನೆ ಸಿಗುತ್ತಿರುವುದು ಈ ಭಾಗದ ಪಕ್ಷಾತೀತ ಜನರ ಹಾಗೂ ಹೋರಾಟ ಸಮಿತಿಯ ಹೋರಾಟ ಫಲ
ಗೋವಿಂದರ ಪರಶುರಾಮ ಕುಡಿಯುವ ನೀರಿನ ಹೋರಾಟ ಸಮಿತಿ ಅಧ್ಯಕ್ಷ
ಪಟ್ಟಣದ ಜನರ ಏಳು ದಶಕದ ಕನಸು ನನಸಾಗುತ್ತಿದೆ. ಇದರಿಂದ ಜನರ ಕುಡಿಯುವ ನೀರಿನ ಬವಣೆಗೆ ಮುಕ್ತಿ ಸಿಗಲಿದೆ
ಸಿ.ಸತೀಶ್ ಕುಡಿಯುವ ನೀರಿನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ

ಭೂಮಿಪೂಜೆ ಇಂದು ಪ್ರತ್ಯೇಕ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಶಾಸಕ ಕೆ.ನೇಮರಾಜ ನಾಯ್ಕ ಮಾರ್ಚ್ 11ರಂದು ಚಾಲನೆ ನೀಡಲಿದ್ದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಟ್ಟಣದ ಏಳು ದಶಕದ ಕುಡಿಯುವ ನೀರಿನ ಬವಣೆಗೆ ಮುಕ್ತಿ ದೊರಕುವ ಕಾಲ ಸನ್ನಿಹಿತವಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.