ADVERTISEMENT

ಸಂಡೂರು: ರೈತರ ಪ್ರತಿಭಟನಾ ಸಮಾವೇಶ ನಾಳೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 13:03 IST
Last Updated 24 ಫೆಬ್ರುವರಿ 2024, 13:03 IST
ಎಂ.ಎಲ್‌.ಕೆ.ನಾಯ್ಡು
ಎಂ.ಎಲ್‌.ಕೆ.ನಾಯ್ಡು   

ಹೊಸಪೇಟೆ (ವಿಜಯನಗರ): ‘ರೈತರ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಂಡೂರಿನ ಯಶವಂತ ವಿಹಾರ ಮೈದಾನದಲ್ಲಿ ಫೆ. 26ರಂದು ಪ್ರತಿಭಟನಾ ಸಮಾವೇಶ ನಡೆಯಲಿದೆ’ ಎಂದು ರಾಜ್ಯ ರೈತ ಸಂಘದ ಬಳ್ಳಾರಿ ಘಟಕದ ಅಧ್ಯಕ್ಷ ಎಂ.ಎಲ್‌.ಕೆ.ನಾಯ್ಡು ಹೇಳಿದರು.‌

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಪೂರ್ವದಿಂದಲೂ ಉಳುಮೆ ಮಾಡುತ್ತಿರುವ ಅರಣ್ಯದಂಚಿನ ರೈತರಿಗೆ ಪಟ್ಟಾ ವಿತರಿಸಬೇಕು, ಬಗರ್‌ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು, ಸಂಡೂರು ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಬೇಕು, ತಾಲ್ಲೂಕಿನ 3,800 ಎಕರೆ ಪಹಣಿಗಳಲ್ಲಿ ಮೂಲ ವಾರಸುದಾರರ ಹೆಸರನ್ನು ರದ್ದುಪಡಿಸಿ ‘ಬ’ ಕರಾಬು ಎಂದು ನಮೂದಾಗಿದೆ, ಪಹಣಿಯಲ್ಲಿ ಮೊದಲಿನಂತೆ ಇರುವ ವಾರಸುದಾರರ ಹೆಸರು ಸೇರಿಸಬೇಕು ಎಂಬ ಹಲವು ಹಕ್ಕೊತ್ತಾಯಗಳನ್ನು ಮಾಡಲಾಗುವುದು’ ಎಂದರು.

‘ಡಿಎಂಎಫ್ ನಿಧಿಯ ಹಣ ಶೇ 50ರಷ್ಟನ್ನು ರೈತರ ಅನುಕೂಲಕ್ಕಾಗಿ ಬಳಸಬೇಕು, ಗಣಿ ದೂಳು ಪರಿಹಾರವಾಗಿ ಎಕರೆಗೆ ₹10 ಸಾವಿರ ನೀಡಬೇಕು, ತಾಲ್ಲೂಕಿನ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಶೇ 90ರಷ್ಟು ಉದ್ಯೋಗ ನೀಡಬೇಕು ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು. ಸಮಾವೇಶದಲ್ಲಿ ವಿಜಯನಗರ ಜಿಲ್ಲೆಯ ರೈತರೂ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ಸಂಘದ ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ಮೋಹನ್‌, ಹನುಮಂತ, ಗೋವಿಂದ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.