ಹೊಸಪೇಟೆ (ವಿಜಯನಗರ): ಬಣ್ಣದ ಹಬ್ಬ ಎಂದೇ ಖ್ಯಾತವಾದ ಹೋಳಿಯನ್ನು ನಗರದ ಬಲ್ಡೋಟಾ ಪಾರ್ಕ್ನಲ್ಲಿ ಬಣ್ಣ ಬಣ್ಣದ ಹೂಗಳಿಂದ ಓಕುಳಿ ಆಡುವ ಮೂಲಕ ಸೋಮವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತ ಪ್ರಭಾರಿ ಭವರ್ಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನೂರಾರು ಮಂದಿ ಹೂವಿನ ಪಕಳೆಗಳನ್ನು ಪರಸ್ಪರ ಎರಚಿ, ಹೋಳಿಯ ಶುಭಾಶಯ ವಿನಿಮಯ ಮಾಡಿದರು. ಕೆಲವರು ನೈಸರ್ಗಿಕ ಬಣ್ಣವನ್ನು ಸಹ ಪರಸ್ಪರ ಹಚ್ಚಿ ಸಂಭ್ರಮಪಟ್ಟರು.
ರಾಸಾಯನಿಕ ಬಣ್ಣ ಬೇಡ: ‘ರಾಸಾಯನಿಕ ಬಣ್ಣ ಬಳಸುವುದರಿಂದ ಚರ್ಮಕ್ಕೆ ಅಪಾಯ ಇರುವುದು ಈಗಾಗಲೇ ಸಾಬೀತಾಗಿದೆ. ಅದರ ಬದಲು ಬಣ್ಣಬಣ್ಣದ ಹೂವಿನ ಪಕಳೆಗಳಿಂದಲೇ ಓಕುಳಿ ಆಡುವುದು ಸಾಧ್ಯವಿದೆ. ಇಲ್ಲಿ ಅದನ್ನು ಮಾಡುವ ಮೂಲಕ ಹೊಸಪೇಟೆ ಇತರ ಕಡೆಗಳಿಗೂ ಮಾದರಿಯಾಗಿದೆ’ ಎಂದು ಭವರ್ಲಾಲ್ ಆರ್ಯ ಹೇಳಿದರು.
‘ಹೋಳಿ ಎಂದರೆ ಎಲ್ಲರೂ ಜಾತಿ, ಮತ ಭೇದ ಮರೆತು ಆಚರಿಸುವ ಸಂಭ್ರಮ. ನಾವೆಲ್ಲರೂ ಒಂದೇ ಎಂಬ ಭಾವ ಈ ಹಬ್ಬದಲ್ಲಿ ಅಡಗಿದೆ. ನಮ್ಮ ಆಚರಣೆಗಳು ಪ್ರಕೃತಿಗೆ ಪೂರಕವಾಗಿದ್ದಾಗ ಪರಿಸರ ಶುದ್ಧವಾಗಿರುತ್ತದೆ, ನಮ್ಮ ಆರೋಗ್ಯವೂ ವೃದ್ಧಿಸುತ್ತದೆ’ ಎಂದು ಅವರು ತಿಳಿಸಿದರು.
ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಬಳ್ಳಾರಿ ಪ್ರಭಾರಿ ರಾಜೇಶ್ ಕಾರ್ವಾ, ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಯೋಗ ಸಾಧಕರಾದ ಬಾಲಚಂದ್ರ ಶರ್ಮಾ, ಎಚ್.ಶ್ರೀನಿವಾಸ ರಾವ್, ಮಂಗಳಮ್ಮ ಇತರರು ಇದ್ದರು.
ಸ್ವಾತಂತ್ರ್ಯ ಉದ್ಯಾನದಲ್ಲಿ: ಸ್ವಾತಂತ್ರ್ಯ ಉದ್ಯಾನದಲ್ಲಿ ಸಹ ನಿತ್ಯದ ಯೋಗಾಭ್ಯಾಸದ ಬಳಿಕ ಸಂಭ್ರಮದಿಂದ ಹೋಳಿ ಅಚರಿಸಲಾಯಿತು. ಇಲ್ಲೂ ಸಹ ನೈಸರ್ಗಿಕ ಬಣ್ಣವನ್ನಷ್ಟೇ ಬಳಸಲಾಯಿತು. ಪರಸ್ಪರ ಬಣ್ಣ ಹಚ್ಚಿ, ಹಾಡುಗಳಿಗೆ ನೃತ್ಯ ಮಾಡಿದ ಯೋಗಪಟುಗಳು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.