ADVERTISEMENT

ಕೊಟ್ಟೂರು: ಸಂಭ್ರಮದಿಂದ ಜರುಗಿದ ಕೊಟ್ಟೂರೇಶ್ವರ ರಥೋತ್ಸವ

ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿ: ಸ್ವಾಮಿಗೆ ಜಯಘೋಷ ಮೊಳಗಿಸಿ ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 5:56 IST
Last Updated 5 ಮಾರ್ಚ್ 2024, 5:56 IST
ಕೊಟ್ಟೂರಿನ ಕೊಟ್ಟೂರೇಶ್ವರಸ್ವಾಮಿ ರಥೋತ್ಸವ ಅಂಗವಾಗಿ ಸೋಮವಾರ ಪಲ್ಲಕ್ಕಿ ಉತ್ಸವ ಜರುಗಿತು
ಕೊಟ್ಟೂರಿನ ಕೊಟ್ಟೂರೇಶ್ವರಸ್ವಾಮಿ ರಥೋತ್ಸವ ಅಂಗವಾಗಿ ಸೋಮವಾರ ಪಲ್ಲಕ್ಕಿ ಉತ್ಸವ ಜರುಗಿತು   

ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವು ನೆರೆದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ 5.25ಕ್ಕೆ ಮೂಲ ನಕ್ಷತ್ರದ ಸಮಯದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು.

ಬೆಳಗಿನ ಜಾವ ದೇವಸ್ಥಾನದಲ್ಲಿ ಕ್ರಿಯಾ ಮೂರ್ತಿಗಳ ನೇತೃತ್ವದಲ್ಲಿ ಅರ್ಚಕರ ಬಳಗವು ಪೂಜಾ ಕೈಂಕರ್ಯ ನೇರವೇರಿಸುತ್ತಿದ್ದಂತೆ ಸರತಿ ಸಾಲಿನಲ್ಲಿ ಸಾಗಿ ಭಕ್ತರು ಸ್ವಾಮಿಯ ದರ್ಶನ ಪಡೆದರು.

ಸಂಜೆ ವೇಳೆಗೆ ಸ್ವಾಮಿಯನ್ನು ಸಕಲ ಬಿರುದಾವಳಿಗಳೊಂದಿಗೆ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ನಂತರ ದೇವಸ್ಥಾನದಿಂದ ಮಂಗಳವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ಹೊರಟಿತು. ರಥ ಬೀದಿಯ ಮುಖಾಂತರ ಸಾಗಿ ದ್ವಾರಬಾಗಿಲ ಹತ್ತಿರ ಬಂದಾಗ ಸಂಪ್ರದಾಯದಂತೆ 5 ದಿನಗಳ ಕಾಲ ಹರಕೆ ಹೊತ್ತು ಉಪವಾಸ ವ್ರತ ಕೈಗೊಂಡಿದ್ದ ದಲಿತ ಮಹಿಳೆಯರಾದ ಉಡಸಲಮ್ಮ ಹಾಗೂ ದುರ್ಗಮ್ಮ ಅವರು ಕೊಟ್ಟೂರೇಶ್ವರ ಸ್ವಾಮಿಗೆ ಆರತಿ ಬೆಳಗಿದ ನಂತರ ಪಲ್ಲಕ್ಕಿ ಉತ್ಸವದ ರಥ ಬಯಲಿನತ್ತ ಸಾಗಿತು.

ADVERTISEMENT

ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಶಿವಪ್ರಕಾಶಸ್ವಾಮಿ ಕೊಟ್ಟೂರು ದೇವರು ನೇತೃತ್ವದ ಅರ್ಚಕ ಬಳಗವು ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರು ‘ಕೊಟ್ಟೂರ ದೊರೆಯೇ ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲು ಮುರಿಯೇ ಬಹುಪರಾಕ್’ ಎಂದು ಜೈಕಾರ ಕೂಗಿದರು.

ರಥವನ್ನು ಎಳೆಯಲು ಪ್ರಾರಂಭಿಸುತ್ತಿದ್ದಂತೆ ನೆರದ ಅಪಾರ ಭಕ್ತರು ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು,ಉತ್ತತ್ತಿ ಮತ್ತು ದವನ ತೂರಿ ಭಕ್ತಿ ಮೆರದರು.

ಈ ಬಾರಿ ನಾಡಿಗೆ ಭೀಕರ ಬರ ಎದುರಾಗಿದ್ದರೂ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು, ರಥ ಸಾಗುವಾಗ ಶ್ರೀಸ್ವಾಮಿಯ ಜಯಘೋಷಣೆ ಮಾಡುತ್ತಾ ಭಕ್ತಿಭಾವ ಮೆರೆದು ರಥೋತ್ಸವಕ್ಕೆ ಸಾಕ್ಷಿಯಾದರು.

ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿಗೆ ಮಹಿಳೆಯರು ಆರತಿ ಬೆಳಗಿದರು

ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಸೇವಾರ್ಥಿಗಳು ಭಕ್ತರಿಗೆ ಎಳನೀರು, ಹಣ್ಣು ನೀಡಿದರು. ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ್ದ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ವಾಹನಗಳನ್ನು ತಡೆದ ಪ್ರಯುಕ್ತ ಭಕ್ತರು ನಡೆದುಕೊಂಡು ಬರುವುದು ಕಂಡುಬಂತು.

ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು ಪ್ರಜಾವಾಣಿ ಚಿತ್ರ/ ಜಿ.ಕರಿಬಸವರಾಜ

ಕೆಸರಿನಲ್ಲಿ ಸಿಲುಕಿದ ರಥದ ಗಾಲಿ;

ತುಂಡಾದ ಮಿನಿ ರಥೋತ್ಸವದಲ್ಲಿ ರಥದ ಗಾಲಿಯು ಕೆಸರಿನಲ್ಲಿ ಸಿಕ್ಕಿಕೊಂಡಿತ್ತು. ಇದನ್ನು ಅರಿಯದ ಭಕ್ತರು ಉತ್ಸಾಹದಿಂದ ಜೋರಾಗಿ ಎಳೆದ ಪರಿಣಾಮ ಮಿಣಿಯು ತುಂಡಾಯಿತು. ನಂತರ ಹಳೆಯ ಮಿಣಿಯನ್ನು ಜೋಡಿಸಲು 20 ನಿಮಿಷಗಳ ಕಾಲ ವ್ಯಯವಾದ್ದರಿಂದ ಪಾದಗಟ್ಟೆ ತಲುಪಲು ಕೊಂಚ ತಡವಾಯಿತು. ನಂತರ ಗೊದೂಳಿ ಸಮಯದಲ್ಲಿ ಮೂಲ ನೆಲೆಗೆ ರಥ ಬಂದು ನಿಂತಾಗ ಭಕ್ತರು ಪಟಾಕಿ ಸಿಡಿಸಿ ಕುಣಿದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.