ADVERTISEMENT

‘ನಗರದಲ್ಲಿ ದಲಿತರಿಗೆ ನಿವೇಶನ ನೀಡಿ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 16:23 IST
Last Updated 15 ಫೆಬ್ರುವರಿ 2024, 16:23 IST
ಹೊಸಪೇಟೆಯಲ್ಲಿ ಗುರುವಾರ ನಗರಸಭೆ ಅಧ್ಯಕ್ಷೆ ಎ.ಲತಾ ಅವರಿಗೆ ಮನವಿ ಸಲ್ಲಿಸಲಾಯಿತು
ಹೊಸಪೇಟೆಯಲ್ಲಿ ಗುರುವಾರ ನಗರಸಭೆ ಅಧ್ಯಕ್ಷೆ ಎ.ಲತಾ ಅವರಿಗೆ ಮನವಿ ಸಲ್ಲಿಸಲಾಯಿತು   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಮನೆ, ನಿವೇಶನ ಇಲ್ಲದ ಎಸ್‌ಸಿ, ಎಸ್‌ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕುಟುಂಬಗಳ ಸಮೀಕ್ಷೆ ನಡೆಸಿ, 365 ಎಕರೆ ಸರ್ಕಾರಿ ಜಮೀನನ್ನು ಇವರ ವಸತಿಗಾಗಿ ಮತ್ತು ಸರ್ಕಾರಿ ಇಲಾಖೆಗಳಿಗಾಗಿ ಕಾಯ್ದಿರಿಸಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ವತಿಯಿಂದ ಮನವಿ ಸಲ್ಲಿಸಲಾಗಿದೆ.

ಸಮಿತಿಯ ರಾಜ್ಯ ಉಪಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಉಪಾಧ್ಯಕ್ಷ ಬಿ.ತಾಯಪ್ಪ ನಾಯಕ, ತಾಲ್ಲೂಕು ಅಧ್ಯಕ್ಷ ಎಂ.ಧನರಾಜ್‌, ಕಾರ್ಯದರ್ಶಿ ಬಿ.ರಮೇಶ್ ಕುಮಾರ್ ಅವರು ಗುರುವಾರ ನಗರಸಭೆ ಅಧ್ಯಕ್ಷೆ ಎ.ಲತಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

‘ನಿವೇಶನ ಮಂಜೂರಿಗಾಗಿ ಕಳೆದ ಒಂಭತ್ತು ವರ್ಷಗಳಿಂದಲೂ ಒತ್ತಾಯಿಸುತ್ತಲೇ ಬರಲಾಗಿದೆ. ಜಂಬುನಾಥಹಳ್ಳಿಯಲ್ಲಿ 84 ಎಕರೆ, ಸಂಕ್ಲಾಪುರ ಗ್ರಾಮದಲ್ಲಿ 281 ಎಕರೆ ಸಹಿತ ಒಟ್ಟು 365 ಎಕರೆ ನಿವೇಶನ ಲಭ್ಯ ಇದ್ದು, ಇದನ್ನು ವಸತಿ ಮತ್ತು ಸರ್ಕಾರಿ ಇಲಾಖೆಗಳಿಗಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

2015ರ ಆಗಸ್ಟ್ 3ರಂದು ಸಲ್ಲಿಸಲಾದ 8,315 ನಿವೇಶನ ಅರ್ಜಿಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು, ವಾಲ್ಮೀಕಿ ಸಮಾಜದ ಸ್ಮಶಾನಕ್ಕಾಗಿ 10  ಎಕರೆ ಜಮೀನು ನೀಡಬೇಕು, ವಿಧಾನಸಭಾ ಚುನಾವಣೆಗೆ ಮೊದಲು ಹಂಚಿದ ಹಕ್ಕುಪತ್ರಗಳನ್ನು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸದೆ ವಂಚಿಸಿದ್ದರ ಬಗ್ಗೆ ತನಿಖೆ ನಡೆಸಬೇಕು, ಕುಡಿಯುವ ನೀರಿನ ಅಭಾವವನ್ನು ಸಮರೋಪಾದಿಯಲ್ಲಿ ನಿವಾರಿಸಬೇಕು ಎಂಬ ಬೇಡಿಕೆ ಸಹಿತ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.