ಹೂವಿನಹಡಗಲಿ: ‘ಎಲ್ಲ ಸಮುದಾಯದೊಟ್ಟಿಗೆ ಅನ್ಯೋನ್ಯವಾಗಿ ಬದುಕುವುದನ್ನು 16ನೇ ಶತಮಾನದಲ್ಲೇ ಕನಕದಾಸರು ಹೇಳಿಕೊಟ್ಟಿದ್ದಾರೆ. ಹಾಲುಮತ ಸಮಾಜದವರು ಯಾರೊಂದಿಗೂ ಸಂಘರ್ಷಕ್ಕಿಳಿಯದೇ ಸೌಹಾರ್ದತೆಯಿಂದ ಬದುಕಿ ಮಾದರಿಯಾಗಬೇಕು’ ಎಂದು ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮೈಲಾರ ಗ್ರಾಮದ ಕಾಗಿನೆಲೆ ಶಾಖಾ ಮಠದಲ್ಲಿ ಸೋಮವಾರ ಹಾಲುಮತ ಸಮಾಜದವರು ಹಮ್ಮಿಕೊಂಡಿದ್ದ ಶ್ರೀಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಸಮಾನತೆ, ಜಾತಿಯತೆ ವಿರುದ್ಧ ಸಮರ ಸಾರಿದ್ದ ಕನಕದಾಸರು ಸೌಹಾರ್ದ ಸಮಾಜ ಕಟ್ಟುವ ಆಶಯ ಹೊಂದಿದ್ದರು. ಅವರ ಆದರ್ಶ ಚಿಂತನೆಗಳನ್ನು ನಾವೆಲ್ಲ ಪಾಲಿಸಬೇಕಿದೆ’ ಎಂದರು.
‘ಹಾಲುಮತ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಬೇಕು. ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಾಲೆ ಕಟ್ಟಿದ್ದೇವೆ. ವಿದ್ಯಾಮಂದಿರದಲ್ಲಿ ಜಾತಿಯ ವಿಷ ಬೀಜ ಬಿತ್ತಬಾರದು. ಮಠದ ಸೂಚನೆ, ಮಾರ್ಗದರ್ಶನವನ್ನು ಎಲ್ಲರೂ ಪಾಲಿಸಬೇಕು’ ಎಂದು ಹೇಳಿದರು.
ಶಾಸಕ ಎಲ್.ಕೃಷ್ಣನಾಯ್ಕ, ಕಾರ್ಣಿಕದ ಗೊರವಯ್ಯ ರಾಮಣ್ಣ, ರಾಜ್ಯ ಕುರುಬರ ಸಂಘದ ನಿರ್ದೇಶಕ ಬಿ.ಹನುಮಂತಪ್ಪ, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದನಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬೀರಪ್ಪ, ಮುಖಂಡರಾದ ಎಂ.ಪರಮೇಶ್ವರಪ್ಪ, ಈಟಿ ಲಿಂಗರಾಜ, ಪರಶುರಾಮಪ್ಪ, ಮರಿರಾಮಪ್ಪ, ಈಟಿ ಮಾಲತೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.