ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ನಗರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಕಾನೂನು ಕಾಲೇಜುಗಳು ಮುಂದಿನ ವರ್ಷದಿಂದಲೇ ಆರಂಭವಾಗಲಿವೆ, ಈಗಾಗಲೇ ಅದಕ್ಕೆ ಮಂಜೂರಾತಿ ದೊರೆತಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಇಲ್ಲಿ ಶುಕ್ರವಾರ ಮಾಧ್ಯಮದವರೊದಿಗೆ ಮಾತನಾಡಿದ ಅವರು, ಇನ್ನು ಆರು ತಿಂಗಳಲ್ಲಿ 300 ಹಾಸಿಗೆಗಳ ಜಿಲ್ಲಾ ಅಸ್ಪತ್ರೆ ಸಿದ್ಧಗೊಳ್ಳಲಿದೆ. ಬಳಿಕ ಅದರ ಮೇಲ್ಭಾಗದಲ್ಲಿ ಮೊದಲಿಗೆ 50 ವಿದ್ಯಾರ್ಥಿಗಳಿಗೆ ಅವಕಾಶ ಇರುವ ವೈದ್ಯಕೀಯ ಕಾಲೇಜಿನ ತರಗತಿಗಳು ಆರಂಭವಾಗಲಿವೆ. ಹಾಸ್ಟೆಲ್ಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೀಗಾಗಿ 2025–26ನೇ ಸಾಲಿನಿಂದಲೇ ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದರು.
ಶಂಕರ್ ಆನಂದ ಸಿಂಗ್ ಕಾಲೇಜಿನಲ್ಲಿ ಲಭ್ಯವಿರುವ ಐದು ಕೊಠಡಿಗಳಲ್ಲಿ ನೂನ ಕಾನೂನು ಕಾಲೇಜು ತರಗತಿಗಳು ಆರಂಭವಾಗಲಿವೆ ಎಂದರು.
ಸಕ್ಕರೆ ಕಾರ್ಖಾನೆ–ಶೀಘ್ರ ನಿರ್ಧಾರ: ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಪ್ರಯತ್ನ ಸಾಗಿದೆ. ನಾಗೇನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ, ರೈತರಿಗೂ ಅನುಕೂಲ ಆಗಲಿದೆ. ಈ ಕುರಿತು ನಾನು ಮುಖ್ಯಮಂತ್ರಿ ಬಳಿ ಈ ವಿಷಯ ಪ್ರಸ್ತಾಪಿಸಿದಾಗ ನನಗೇ ಸಕ್ಕರೆ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. ನಾನು ಕೂಡ ಈ ಬಗ್ಗೆ ಹಿರಿಯರಲ್ಲಿ ಚರ್ಚಿಸುತ್ತಿರುವೆ. 15 ದಿನಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರಲಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.