ಅರಸೀಕೆರೆ: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗುವಂತೆ ಹರಕೆಯನ್ನು ಹೊತ್ತಿದ್ದ ಅಭಿಮಾನಿಯೊಬ್ಬರು 12 ಕಿಮೀ ದೀಡು ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.
ಹೋಬಳಿಯ ಹಿರೇಮೆಗಳಗೆರೆ ಗ್ರಾಮದ ಜಿ.ಡಿ ಮಲ್ಲೇಶಪ್ಪ (60) ಹರಕೆ ತೀರಿಸಿದ ಅಭಿಮಾನಿ.
ಹಿರೇಮೆಗಳಗೆರೆ ಗ್ರಾಮದ ಹೃದಯ ಭಾಗದಲ್ಲಿನ ಉಚ್ಚಂಗೆಮ್ಮ ದೇವಿ ದೇವಸ್ಥಾನದಿಂದ ಬೇವಿನಹಳ್ಳಿ ತಾಂಡ, ಯು.ಬೇವಿನಹಳ್ಳಿ ಗ್ರಾಮದ ಮೂಲಕ ಉಚ್ಚಂಗಿದುರ್ಗ ಗ್ರಾಮದ ಉಚ್ಚಂಗೆಮ್ಮ ಪಾದಗಟ್ಟೆ ದೇವಸ್ಥಾನದವರೆಗೆ 12 ಕಿಮೀ ದೀಡು ನಮಸ್ಕಾರ ಹಾಕಿದರು.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಗ್ರಾಮಸ್ಥರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿದರೆ, ಸಾರ್ವಜನಿಕರು ಮೋದಿ ಪರ ಘೋಷಣೆ ಕೂಗಿ ಪ್ರೋತ್ಸಾಹಿಸಿದರು.
'ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಜಿ ಅವರು ಗೆಲುವು ಪಡೆದು ಅವರ ನೇತೃತ್ವದ ಸರ್ಕಾರ ರಚನೆ ಆಗಬೇಕು ಎಂದು ಉಚ್ಚಂಗೆಮ್ಮ ದೇವಿಗೆ ಹರಕೆ ಕಟ್ಟಿಕೊಂಡಿದ್ದೆ. ನನ್ನ ಬೇಡಿಕೆ ಫಲಿಸಿದ್ದರಿಂದ ಹರಕೆ ತೀರಿಸುತ್ತಿರುವೆ' ಎಂದು' ಜಿ.ಡಿ ಮಲ್ಲೇಶಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.