ADVERTISEMENT

ಮೈಲಾರಲಿಂಗೇಶ್ವರ ಕಾರ್ಣಿಕ ಮಹೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 3:23 IST
Last Updated 25 ಫೆಬ್ರುವರಿ 2024, 3:23 IST
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ಭರತ ಹುಣ್ಣಿಮೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ಭರತ ಹುಣ್ಣಿಮೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು   

ಹೂವಿನಹಡಗಲಿ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಫೆ. 26ರಂದು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಮಹೋತ್ಸವ ಜರುಗಲಿದ್ದು, ನಾಡಿನ ನಾನಾ ಭಾಗಗಳ ಭಕ್ತರು ಸುಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಮೈಲಾರಕ್ಕೆ ಸಾಗುವ ಎಲ್ಲ ಮಾರ್ಗಗಳಲ್ಲೂ ಶನಿವಾರ ಸಾಲು ಸಾಲು ಸವಾರಿ ಬಂಡಿಗಳು, ಟ್ರ್ಯಾಕ್ಟರ್ ಹಾಗೂ ಪಾದಯಾತ್ರಿಗಳ ದಂಡು ಕಂಡು ಬಂತು. ಸುಡುವ ಬಿಸಿಲು ಲೆಕ್ಕಿಸದೆ ಮೈಲಾರಲಿಂಗಸ್ವಾಮಿಯನ್ನು ಮನದಲ್ಲೇ ನೆನೆಯುತ್ತಾ ಪಾದಯಾತ್ರಿಗಳು ಹೆಜ್ಜೆ ಹಾಕಿದರು.

ವಾರ್ಷಿಕ ಜಾತ್ರೆಗಾಗಿ ಮೈಲಾರ ಸುಕ್ಷೇತ್ರಕ್ಕೆ ಆಗಮಿಸಿರುವ ಭಕ್ತರು ಜಾತ್ರಾ ಮೈದಾನ, ಹೊಲ, ಗದ್ದೆ ಬಯಲುಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಸುಕ್ಷೇತ್ರದಲ್ಲಿ ಭಕ್ತರಿಗೆ ಎಲ್ಲ ರೀತಿಯ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

ಶನಿವಾರ ಭರತ ಹುಣ್ಣಿಮೆ ಅಂಗವಾಗಿ ಸುಕ್ಷೇತ್ರದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರಲಿಂಗನ ಲಾಂಛನವುಳ್ಳ ಧ್ವಜಕ್ಕೆ ಪೂಜೆ ಸಲ್ಲಿಸಿ ಆರೋಹಣ ಮಾಡಿದರು. ಬಳಿಕ ಜಾತ್ರೆಯಲ್ಲಿ ಅಳವಡಿಸುವ ತಾತ್ಕಾಲಿಕ ಹುಂಡಿಗಳಿಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಪ್ರಮೋದ ಭಟ್, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.