ಮರಿಯಮ್ಮನಹಳ್ಳಿ: ‘ಪಟ್ಟಣದ ಆರಾಧ್ಯ ದೈವಗಳಾದ ಶ್ರೀಲಕ್ಷ್ಮಿನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿಯ ನೂತನ ಜೋಡಿ ರಥಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ವರ್ಷದ ಶ್ರೀರಾಮನವಮಿಯಂದು ನಡೆಯುವ ಜೋಡಿ ರಥೋತ್ಸವ ಸಂದರ್ಭಕ್ಕೆ ರಥಗಳು ಸಿದ್ಧವಾಗಲಿವೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಜೋಡಿ ರಥಗಳ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.‘ ಜೋಡಿ ರಥೋತ್ಸವಗಳು ಸುಮಾರು ಆರು ನೂರು ವರ್ಷಗಳಷ್ಟು ಹಳೆಯದಾಗಿದ್ದು, ಭಕ್ತರ ಹಾಗೂ ದಾನಿಗಳ ಸಹಾಯ ಹಾಗೂ ಸಹಕಾರದಲ್ಲಿ ಉತ್ತಮವಾಗಿ ನಿರ್ಮಾಣವಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಎತ್ತರದ ರಥಗಳಾಗಲಿವೆ’ ಎಂದರು.
‘ರಥಗಳ ನಿರ್ಮಾಣಕ್ಕೆ ಕೋಡಿಗಟ್ಟಲೆ ಹಣ ಬೇಕಾಗಿದ್ದಿರಿಂದ ಈ ಭಾಗದ ಹಲವಾರು ದಾನಿಗಳು ದಾನ ನೀಡಿದ್ದು, ಅದರಲ್ಲಿ ಕೆಲ ದಾನಿಗಳು ಕೋಟಿ ರೂಪಾಯಿ ನೀಡಿರುವುದು ಶ್ಲಾಘನೀಯ. ಧಾರ್ಮಿಕ ದತ್ತಿ ಇಲಾಖೆಗೆ ದೇವಸ್ಥಾನ ಒಳಪಟ್ಟಿರುವುದರಿಂದ ಹಣ ಲೋಪವಾಗದಂತೆ ಎಚ್ಚರವಹಿಸಲಾಗುವುದು’ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರುತಿ ಎಂ.ಮಾಳಪ್ಪಗೌಡ, ಉಪತಹಶೀಲ್ದಾರ್ ಹಾಗೂ ಆಡಳಿತಾಧಿಕಾರಿ ಎಚ್.ನಾಗರಾಜ್, ಕಂದಾಯ ನಿರೀಕ್ಷಕ ಅಂದಾನಗೌಡ, ಸಮಿಯ ಅಧ್ಯಕ್ಷ ಸಿ.ಸತೀಶ್, ಪರಶುರಾಮ, ದೊಡ್ಡ ರಾಮಣ್ಣ, ಎಲೆಗಾರ ಮಂಜುನಾಥ, ಎರ್ರಿಸ್ವಾಮಿ, ವಿಶ್ವನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.