ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿ ನೋಡಲು ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಅದರಲ್ಲಿ ಪುಟ್ಟ ಕಂದಮ್ಮಗಳನ್ನು ಹೊತ್ತುಕೊಂಡು ಬರುವ ಮಹಿಳೆಯರೂ ಇದ್ದಾರೆ. ಆದರೆ ಮಕ್ಕಳಿಗೆ ಎದೆಹಾಲು ಉಣಿಸಲು ಅಗತ್ಯವಾದ ಕೊಠಡಿಗಳೇ ಇಲ್ಲಿಲ್ಲ.
ವಿಜಯ ವಿಠ್ಠಲ ದೇವಸ್ಥಾನದ ಒಳಭಾಗದಲ್ಲಿ ಕಲ್ಲಿನ ರಥದ ಸಮೀಪ ಹಾಗೂ ನಮಸ್ಕಾರ ಮಂಟಪದ ಸಮೀಪ ಭಾನುವಾರ ಬಯಲಲ್ಲೇ ಇಬ್ಬರು ಮಹಿಳೆಯರು ಮಕ್ಕಳಿಗೆ ಅನಿವಾರ್ಯವಾಗಿ ಹಾಲುಣಿಸುತ್ತಿದ್ದ ದೃಶ್ಯ ಕಾಣಿಸಿತು.
ವಿಜಯ ವಿಠ್ಠಲ ಮಾತ್ರವಲ್ಲ, ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ಸಹ ಹಾಲುಣಿಸಲು ಅಗತ್ಯವಿರುವ ಕೊಠಡಿ ನಿರ್ಮಾಣವಾಗಿಲ್ಲ. ಭಾರಿ ಬಿಸಿಲಿನ ಈ ದಿನಗಳಲ್ಲಿ ಪುಟ್ಟ ಮಕ್ಕಳನ್ನು ಹೊತ್ತು ಬರುವ ತಾಯಂದಿರು ಪಡುವ ಕಷ್ಟ ಅಷ್ಟಿಷ್ಟಲ್ಲ.
ಹಂಪಿಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಕುಡಿಯುವ ನೀರು, ಶೌಚಾಲಯದಂತೆ ಹಾಲುಣಿಸುವ ಕೊಠಡಿ ನಿರ್ಮಾಣವೂ ಆಗಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ಪ್ರವಾಸಿ ಋತು ಸಮಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನಕ್ಕೆ 30 ಸಾವಿರಕ್ಕಿಂತಲೂ ಅಧಿಕವೇ ಇರುತ್ತದೆ. ವರ್ಷಕ್ಕೆ ₹15 ಕೋಟಿಗೂ ಅಧಿಕ ಹಣವನ್ನು ಪ್ರವೇಶ ಶುಲ್ಕ ರೂಪದಲ್ಲೇ ಪಡೆಯುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಇಂತಹ ಕನಿಷ್ಠ ಸೌಲಭ್ಯ ಕಲ್ಪಿಸಲು ಇನ್ನೆಷ್ಟು ದಿನ ಬೇಕು ಎಂಬುದು ಪ್ರವಾಸಿಗರ ಪ್ರಶ್ನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.