ಹರಪನಹಳ್ಳಿ: ‘ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವಾಭಿಮಾನಿ ಪದವೀಧರರು ನನ್ನನ್ನು ಗೆಲ್ಲಿಸುತ್ತಾರೆ’ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎನ್.ಪ್ರತಾಪ್ ರೆಡ್ಡಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮತಯಾಚಿಸಿದ ಅವರು, ‘ಒಂದು ಕಡೆ ಬಿಜೆಪಿ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಿ, ಹಿಂಸೆ ಮಾಡಿಸುತ್ತಿದೆ. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುವುದಾಗಿ ನಂಬಿಸಿ, ವಂಚನೆ ಮಾಡಿದೆ. ಆದರೆ ನಾನು ಯಾರಿಗೂ ತಲೆಬಾಗುವ ಪ್ರಶ್ನೆಯೇ ಇಲ್ಲ. ಉಚ್ಚಾಟನೆಗೆ ಜಗ್ಗುವುದಿಲ್ಲ. ಒಂದು ಬಾರಿ ಸೋತಿರುವ ನನಗೆ, ಈ ಬಾರಿ ಗೆಲುವು ನಿಶ್ಚಿತ’ ಎಂದರು.
ಸಿಂಗಟಾಲೂರು ಏತನೀರಾವರಿ ಯೋಜನೆ ಡ್ಯಾಂ ಕಟ್ಟುವ ಗುತ್ತಿಗೆ ಪಡೆದು ಗುಣಮಟ್ಟದ ಕೆಲಸ ಮಾಡಿಕೊಟ್ಟಿರುವೆ. ಅಲ್ಲಿ 7.5 ಟಿಎಂಸಿ ನೀರು ಸಂಗ್ರಹವಾಗಿ ಸುತ್ತಮುತ್ತಲ ಹಳ್ಳಿಗಳು ಲಾಭ ಪಡೆಯುತ್ತಿವೆ. ಎಂಎಲ್ಸಿ ಆಗಿ ಗೆದ್ದರೆ ಸಿಂಗಟಾಲೂರು ಡ್ಯಾಂ ಯೋಜನೆಯನ್ನು 11 ಟಿಎಂಸಿಗೆ ಹೆಚ್ಚಿಸಿ, ಹರಪನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲ್ಲೂಕುಗಳ ರೈತರಿಗೆ ಅನುಕೂಲ ಮಾಡುವುದಾಗಿ ಭರವಸೆ ನೀಡಿದರು.
ಮುಖಂಡ ಪಟೇಲ್ ಬೆಟ್ಟನಗೌಡ ಮಾತನಾಡಿ, ‘ಪ್ರತಿ ಬಾರಿಯ ಚುನಾವಣೆಯಲ್ಲಿ ಬೀದರ್, ಕಲಬುರ್ಗಿಯ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ, ಆದರೆ ಅವರು ಗೆದ್ದ ನಂತರ ಈ ಕಡೆ ಮುಖ ಮಾಡುವುದಿಲ್ಲ. ಹಾಗಾಗಿ ಈ ಬಾರಿ ನಮ್ಮ ಪಕ್ಕದ ಜಿಲ್ಲೆಯವರಾದ ಪ್ರತಾಪ ರೆಡ್ಡಿ ಅವರನ್ನು ಗೆಲ್ಲಿಸೋಣ’ ಎಂದರು.
ಹಿರೆಮೇಗಳಗೆರೆ, ತೆಲಿಗಿ, ಕಡತಿ, ಕಂಚಿಕೇರಿ ಗ್ರಾಮಗಳಿಗೆ ತೆರಳಿ ಪದವಿಧರರನ್ನು ಬೇಟಿಯಾಗಿ ಮತ ಹಾಕಲು ಮನವಿ ಮಾಡಿದರು. ಮುಖಂಡರಾದ ನಿಷ್ಠಿ ರುದ್ರಪ್ಪ, ಕೆ.ಉಚ್ಚಂಗೆಪ್ಪ ಮಾತನಾಡಿದರು.
ಪರಮೇಶ್ವರಪ್ಪ, ಹಿರೆಮೇಗಳಗೆರೆ ಬಸವರಾಜ್, ಪೂಜಾರ ಮಂಜುನಾಥ, ಕಣಿವಿಹಳ್ಳಿ ಎಂ.ಪ್ರಸಾದ್, ಎ.ಕಣವಿರಾಯ, ಕಡತಿ ರಾಜಪ್ಪ, ನಿಚ್ಚವ್ವನಹಳ್ಳಿ ಪರಶುರಾಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.