ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ‘ಮ್ಯೂಸಿಯಂ’ ಸೇರಿಬಿಟ್ಟ ಉಪಯುಕ್ತ ಕೋರ್ಸ್‌

ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದಲ್ಲಿದ್ದ ಮ್ಯೂಸಿಯಂ ಸಹ ಮೂಲೆಗುಂಪು

ಎಂ.ಜಿ.ಬಾಲಕೃಷ್ಣ
Published 17 ಅಕ್ಟೋಬರ್ 2024, 5:38 IST
Last Updated 17 ಅಕ್ಟೋಬರ್ 2024, 5:38 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣವಾದ ಹಂಪಿಯಲ್ಲೇ ಸ್ಥಾಪನೆಗೊಂಡಿರುವ ಜಗತ್ತಿನ ಏಕೈಕ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಪುರಾತತ್ವ, ವಸ್ತುಸಂಗ್ರಹಾಲಯಶಾಸ್ತ್ರ ಮತ್ತು ಪ್ರವಾಸೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಸ್ಥಗಿತಗೊಂಡು ಎರಡು ವರ್ಷ ಕಳೆದಿದ್ದು, ಮತ್ತೆ ಆರಂಭಿಸುವ ಇಚ್ಛಾಶಕ್ತಿ ಯಾರಲ್ಲೂ ಕಾಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿ ಮಾರ್ಗದರ್ಶಿಗಳು (ಟೂರ್‌ ಗೈಡ್‌) ಇರುವ ಪ್ರದೇಶ ಹಂಪಿ. ರಾಜ್ಯದ ಎಲ್ಲೆಡೆ ಇರುವ ಗೈಡ್‌ಗಳ ಸಂಖ್ಯೆ 398, ಈ ಪೈಕಿ 179ರಷ್ಟು ಮಂದಿ ಹಂಪಿಯಲ್ಲೇ ಇದ್ದಾರೆ. ಇನ್ನೂ 100 ಮಂದಿಯನ್ನು ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಇವರಿಗೆ ಮಾತ್ರವಲ್ಲ, ಪುರಾತತ್ವ ವಿಷಯದಲ್ಲಿ ಹೆಚ್ಚಿನ ಅಧ್ಯಯನದ ಆಸಕ್ತಿ ಇದ್ದವರಿಗೆ ಈ ಡಿಪ್ಲೊಮಾ ಬಹಳ ಉಪಯುಕ್ತವಾಗಿತ್ತು. ಆದರೆ ಹಂಪಿ ವಿಶ್ವವಿದ್ಯಾಲಯ ಅಂತಹ ಜ್ಞಾನಾರ್ಜನೆಯ ಕೇಂದ್ರವಾಗುವುದರಿಂದ ದೂರವೇ ಉಳದಿದೆ.

‘ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ, ಹೀಗಾಗಿ ಕೋರ್ಸ್‌ ಆರಂಭಿಸುತ್ತಿಲ್ಲ ಎಂಬ ಸಿದ್ಧ ಉತ್ತರವನ್ನು ನೀಡುತ್ತ ಬರಲಾಗಿದೆ. ಆದರೆ ಅನುಮೋದನೆ ಸಿಗದ ಕೆಲವು ಸ್ನಾತಕೋತ್ತರ ಪದವಿಗಳಿಗೆ ಇಲ್ಲಿ ಈಗಲೂ ಅರ್ಜಿ ಕರೆಯಲಾಗುತ್ತಿದೆ, ತರಗತಿಗಳು ನಡೆಯುತ್ತಿವೆ. ಹಂಪಿಯ ಪಾರಂಪರಿಕ ಇತಿಹಾಸ ನೋಡಿಯಾದರೂ ಈ ಡಿಪ್ಲೊಮಾ ಮುಂದುವರಿಸುವ ಅಗತ್ಯ ಇತ್ತು’ ಎಂದು ಈ ಕ್ಷೇತ್ರದ ತಜ್ಞರೊಬ್ಬರು ಅಭಿಪ್ರಾಯಪಟ್ಟರು.

ADVERTISEMENT

ಹಲವು ಕೋರ್ಸ್, ಕೆಲವಷ್ಟೇ ಜೀವಂತ:

‘2017–18ರ ಅವಧಿಯಲ್ಲಿ ಪ್ರೊ.ಮಲ್ಲಿಕಾ ಘಂಟಿ ಅವರು ಕುಲಪತಿಯಾಗಿದ್ದ ವೇಳೆ ಹಲವು ಹೊಸ ಸ್ನಾತಕೋತ್ತರ ಕೋರ್ಸ್‌ಗಳನ್ನು ಮತ್ತು ಪಿ.ಜಿ. ಡಿಪ್ಲೊಮಾಗಳನ್ನು ಅಳವಡಿಸಲಾಗಿತ್ತು. ಆದರೆ ಬಳಿಕ ಬಂದ ಪ್ರೊ.ಸಾ.ಚಿ.ರಮೇಶ್ ಅವಧಿಯಲ್ಲಿ ಕೆಲವು ಕೋರ್ಸ್‌ಗಳು ಮತ್ತು ಡಿಪ್ಲೊಮಾಗಳ ಉಸಿರನ್ನು ಬಲಾತ್ಕಾರವಾಗಿಯೇ ನಿಲ್ಲಿಸಲಾಯಿತು. ಅವುಗಳನ್ನು ಅವಸಾನಗೊಳಿಸಿದ ಬಗೆ ಸಹ ಎಲ್ಲರಿಗೂ ಗೊತ್ತಿರುವಂತದ್ದೇ. ಅನೇಕ ಅವ್ಯವಹಾರಗಳು ಈ ಅವಧಿಯಲ್ಲಿ ನಡೆದವು’ ಎಂದು ಇನ್ನೊಬ್ಬ ತಜ್ಞ ಹೇಳಿದರು.

ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಸಹ ಇದು ಉತ್ತಮ ಕೋರ್ಸ್‌ ಆಗಿತ್ತು ಎಂಬುದನ್ನು ಒಪ್ಪಿಕೊಂಡರು. ‘ಸರ್ಕಾರದ ಅನುಮತಿ ಪಡೆಯದೆ ಯಾವ ಕೋರ್ಸ್‌ ಸಹ ಆರಂಭಿಸಕೂಡದು ಎಂಬ ಸ್ಪಷ್ಟ ಆದೇಶ ಬಂದಿದೆ. ಇದನ್ನು ನಾವು ಪಾಲಿಸಲೇಬೇಕಾಗುತ್ತದೆ. ಒಂದು ಹೊಸ ಕೋರ್ಸ್‌ ಆರಂಭವಾದರೆ ಅದಕ್ಕೆ ಬೋಧಕ, ಬೋಧಕೇತರ ಸಿಬ್ಬಂದಿ ಸಹಿತ ಹಲವು ಬೇಡಿಕೆಗಳು ಬರುತ್ತವೆ, ಹಣಕಾಸಿನ ಅನುದಾನ ಅಗತ್ಯವಾಗುತ್ತದೆ. ಹೀಗಾಗಿ ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಕೋರ್ಸ್ ಆರಂಭಿಸುವಂತಿಲ್ಲ ಎಂಬ ಸೂಚನೆ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಕೋರ್ಸ್‌ ಆರಂಭಕ್ಕೆ ಮೊದಲು ಸರ್ಕಾರದ ಶಾಸನಬದ್ಧ ಅನುಮತಿ ಕಡ್ಡಾಯಗೊಳಿಸಲಾಗಿದೆ ಹೀಗಾಗಿ ಒಂದೂವರೆ ವರ್ಷದಿಂದ ಹೊಸ ಕೋರ್ಸ್‌ ಆರಂಭಿಸಲು ಸಾಧ್ಯವಾಗಿಲ್ಲ
ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ ಹಂಪಿ ಕನ್ನಡ ವಿಶ್ವವಿದ್ಯಾಲಯ

ಪ್ರೊ.ಕಲಬುರ್ಗಿ ಕನಸು ನುಚ್ಚುನೂರು

ಕನ್ನಡ ವಿಶ್ವವಿದ್ಯಾಲಯ ಕಾಯ್ದೆಯ ಎರಡನೇ ಆಧ್ಯಾಯದ 14ನೇ ವಿಷಯವಾಗಿ ಉತ್ಕೃಷ್ಟ ಮಾದರಿಯ ವಸ್ತುಗಳು ಮತ್ತು ಕರ್ನಾಟಕದ ಕಲಾಕೃತಿಗಳನ್ನು ಸಂಗ್ರಹಿಸಿ ಇಡಲು ಒಂದು ಸಂಗ್ರಹಾಲಯ ನಿರ್ಮಿಸಬೇಕು ಎಂದು ತಿಳಿಸಲಾಗಿತ್ತು.

ಅದರಂತೆ ಅಂದಿನ ಕುಲಪತಿ ಪ್ರೊ. ಎಂ.ಎಂ.ಕಲಬುರ್ಗಿ ಅವರು 2000ನೇ ಇಸವಿಯಲ್ಲಿ ಈಗಿನ ಅತ್ಯಾಕರ್ಷಕ ‘ಅಕ್ಷರ’ ಗ್ರಂಥಾಲಯ ಕಟ್ಟಡದಲ್ಲಿ ₹25 ಲಕ್ಷದ ಷೋಕೇಸ್‌ಗಳನ್ನು ಸಿದ್ಧಪಡಿಸಿ ಮ್ಯೂಸಿಯಂಗೆ ವ್ಯವಸ್ಥೆ ಮಾಡಿದ್ದರು. ಆದರೆ ಆಗಲೇ ಅದಕ್ಕೆ ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು. 2013ರಲ್ಲಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ಕುಲಪತಿಯಾಗಿದ್ದ ವೇಳೆ ಒಳಾಂಗಣದಲ್ಲಿ ಘಟಿಕೋತ್ಸವ ನಡೆಸುವ ನೆಪ ಒಡ್ಡಿ ಮ್ಯೂಸಿಯಂ ಸ್ಥಳಾಂತರಿಸುವ ನಿರ್ಧಾರಕ್ಕೆ ಬರಲಾಯಿತು.

ಇಡೀ ಷೋಕೇಸ್ ಛಿದ್ರಗೊಳಿಸಿ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಬಳಿಕ ಅದನ್ನು ವಾಪಸ್‌ ಇಲ್ಲಿಗೆ ತಂದು ಇಡಲೇ ಇಲ್ಲ. ಕೊನೆಗೆ ಅದಕ್ಕೆ ಸ್ಥಳ ಸಿಕ್ಕಿದ್ದು ಜನರಿಂದ ದೂರವೇ ಇರುವಂತಹ ಹಳೆಯ ಪ್ರಸಾರಾಂಗ ಕಟ್ಟಡದಲ್ಲಿ!

1993ರಿಂದ 96ರವರೆಗೆ ಮನೆ ಮನೆಗೆ ತೆರಳಿ ಅಪೂರ್ವ, ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ವ್ಯವಸ್ಥೆಗೊಳಿಸಿದ ಮ್ಯೂಸಿಯಂ ಇದು. ವರ್ಷ ವರ್ಷವೂ ಅದಕ್ಕೆ ವಸ್ತುಗಳು ಸೇರ್ಪಡೆಯಾಗುತ್ತಲೇ ಇರಬೇಕು, ಆದರೆ ಸೇರ್ಪಡೆ ಬಿಡಿ, ಇರುವ ವಸ್ತುವನ್ನೇ ಉಳಿಸಿಕೊಳ್ಳುವುದೇ ಕಷ್ಟ ಎಂಬಂತಹ ಸ್ಥಿತಿ ಇದೆ. ನಿರ್ದೇಶಕರಿಲ್ಲದ ಈ ಮ್ಯೂಸಿಯಂ ಸಂಚಾಲಕರೊಬ್ಬರ ಉಸ್ತುವಾರಿಯಲ್ಲಿ ಇದ್ದು, ಜನರಿಂದ ದೂರವೇ ಉಳಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.