ಹೊಸಪೇಟೆ/ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಹೊಸಪೇಟೆ ಸುತ್ತಮುತ್ತ ಮಧ್ಯರಾತ್ರಿ ಅರ್ಧ ಗಂಟೆ ಮಳೆ ಸುರಿಯಿತು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕಾನಹೊಸಹಳ್ಳಿ ಹೋಬಳಿ ಯಂಬಳಿ-ಆಲೂರು ಮಧ್ಯದ ರಸ್ತೆ ಕೊಚ್ಚಿ ಹೋಗಿದೆ, ದೊಡ್ಡ ಹಳ್ಳದಲ್ಲಿ ಈ ರಸ್ತೆಯಿದ್ದು, ಸದ್ಯ ಆಲೂರು-ಯಂಬಳಿಯ ಸಂಪರ್ಕ ಕಡಿತಗೊಂಡಿದೆ.
ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾದ್ದರಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಗೋ ಕಟ್ಟೆಗಳು ಭರ್ತಿಯಾಗಿವೆ, ಕೆರೆಗಳಿಗೆ ನೀರು ಹರಿದು ಬರುತ್ತಿದ್ದು, ಕಾನಹೊಸಹಳ್ಳಿಯ ಕೆರೆಯಲ್ಲಿ ನೀರು ಸಂಗ್ರಹಗೊಂಡಿವೆ.
ಹೊಸಹಳ್ಳಿ– 5.62 ಸೆಂ.ಮೀ., ಬಣವಿಕಲ್ಲು–3.24 ಸೆಂ.ಮೀ., ಚಿಕ್ಕಜೋಗಿಹಳ್ಳಿ– 2.62 ಸೆಂ.ಮೀ. ಮಳೆಯಾಗಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ತಾಲ್ಲೂಕಿನ ಸಕ್ರಹಳ್ಳಿ ಗ್ರಾಮದಲ್ಲಿ ಕೃಷಿ ಹೊಂಡ ಭರ್ತಿಯಾಗಿದೆ. ಹಗರಿಬೊಮ್ಮನಹಳ್ಳಿ– 4.36 ಸೆಂ.ಮೀ, ಮಾಲವಿ– 3.24 ಸೆಂ.ಮೀ, ಹಂಪಸಾಗರ– 3 ಸೆಂ.ಮೀ, ತಂಬ್ರಹಳ್ಳಿ–0.46 ಸೆಂ.ಮೀ ಮಳೆ ದಾಖಲಾಗಿದೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಸಹ ಸಾಧಾರಣ ಮಳೆ ಸುರಿದಿದೆ.
ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಉತ್ತಮ ಮಳೆಯಾಗಿದೆ. ಒಣಗಿ ಹೋಗಿದ್ದ ಹಳ್ಳಕೊಳ್ಳಗಳಿಗೆ ನೀರು ಹರಿದು ಬರುತ್ತಿದೆ. ಸಂಡೂರಿನ ಜೀವಜಲ ನಾರಿ ಹಳ್ಳ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಎಲೆಯುದುರಿ ಸಂಪೂರ್ಣ ಒಣಗಿ ನಿಂತಿದ್ದ ಸಂಡೂರು ಬೆಟ್ಟಗಳಲ್ಲಿ ಮಳೆಯ ಆಗಮನದಿಂದ ಹೊಸ ಚಿಗುರು ಕಾಣಿಸಿಕೊಂಡಿದೆ. ಉತ್ತಮ ಮಳೆ ರೈತರ ಮೊಗದಲ್ಲೂ ಮಂದಹಾಸ ತಂದಿದ್ದು ಕೃಷಿ ಚಟುವಟಿಕೆಗಳಿಗೆ ರೈತರು ಅಣಿಯಾಗುತ್ತಿದ್ದಾರೆ. ಸಂಡೂರು–2.48 ಸೆಂ.ಮೀ. ಮಳೆ ಸುರಿದಿದೆ.
ಹೊಸಪೇಟೆ ಪ್ರವಾಸಿ ಮಂದಿರ–2.74 ಸೆಂ.ಮೀ., ರೈಲು ನಿಲ್ದಾಣ–2.25 ಸೆಂ.ಮೀ., ಕಮಲಾಪುರ–2.91 ಸೆಂ.ಮೀ., ಮರಿಯಮ್ಮನಹಳ್ಳಿ– 1.05 ಸೆಂ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.