ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ಆಲೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ನಸುಕಿನಲ್ಲಿ ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಟೆಂಪೊ ಟ್ರಾವೆಕರ್ ವಾಹನ ಡಿಕ್ಕಿ ಹೊಡೆದುದರಿಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಚಾಲಕ ಸಹಿತ 15 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಡಿ ಗ್ರಾಮದ ನಿವೃತ್ತ ಕಂಡಕ್ಟರ್ ರಾಮಕೃಷ್ಣಯ್ಯ (68) ಮೃತರು.
ಗಾಯಗೊಂಡವರನ್ನು ಆರೂಡಿ ಗ್ರಾಮದ ಲಕ್ಷ್ಮಿ ನರಸಪ್ಪ, ಶಾರದಮ್ಮ, ಸುಂದರ್ ಕುಮಾರ್, ಜಯಶ್ರೀ, ಆರಾಧ್ಯ, ಅನನ್ಯ, ಭೀಮಾಶಂಕರ, ನಾಗರತ್ನ, ಎಲ್. ಗಾಯತ್ರಮ್ಮ, ಕೆ.ಎಲ್.ಗಾಯತ್ರಮ್ಮ, ಮಂಜುಳ, ನರಸಿಂಹರಾಜ ಚಾಲಕ), ಜಯರಾಮರೆಡ್ಡಿ, ನಾಗರಾಜ, ಮರಿಯಮ್ಮ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಕ್ಕಳಿದ್ದಾರೆ.
ಟಿ ಟಿ ವಾಹನವು ಕಲಬುರಗಿಯಿಂದ ಆರೋಡಿ ಗ್ರಾಮಕ್ಕೆ ತೆರಳುತ್ತಿತ್ತು. ಕಲಬರುಗಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಸ್ವಗ್ರಾಮ ತೆರಳುವಾಗ ಅಪಘಾತವಾಗಿದೆ.
ಗಂಗಾವತಿಯಿಂದ ಮೈಸೂರಿಗೆ ಹೊರಟಿದ್ದ ಲಾರಿಯೊಂದು ರಸ್ತೆ ಬದಿಯಲ್ಲಿ ಕೆಟ್ಟು ನಿಂತಿತ್ತು. ನಸುಕಿನ 2.40ರ ವೇಳೆ ಲಾರಿಗೆ ಟಿ ಟಿ ಗಾಡಿ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಟಿಟಿ ವಾಹನವು ನಜ್ಜುಗುಜ್ಜಾಗಿದ್ದು, ಇಬ್ಬರು ಸಿಲುಕಿಕೊಂಡಿದ್ದರು. ಅವರನ್ನು ಹೊರ ತೆಗೆಯಲು ಪೊಲೀಸರು, ಟೋಲ್ ಸಿಬ್ಬಂದಿ ಹರಸಾಹಸಪಟ್ಟರು.
ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.