ಹೊಸಪೇಟೆ : ವಿಶ್ವ ಪಾರಂಪರಿಕ ತಾಣ ಹಂಪಿಗೆ ದೇಶ ಮಾತ್ರವಲ್ಲ, ಜಗತ್ತಿನ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ದೇಶದ ಬುಡಕಟ್ಟು ಜನರ ಕಲೆ, ಕುಸುರಿ, ನೈಪುಣ್ಯವನ್ನು ಪರಿಚಯಿಸುವ ಮೂಲಕ ಜಗತ್ತಿಗೆ ಅದನ್ನು ಪಸರಿಸುವ ಮತ್ತೊಂದು ಪುಟ್ಟ ಪ್ರಯತ್ನ ‘ಟ್ರೈಬ್ಸ್ ಇಂಡಿಯಾ’ ಮಳಿಗೆಯ ಮೂಲಕ ಇಲ್ಲಿ ಆರಂಭವಾಗಿದೆ.
ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳುವ ವಾಹನ ನಿಲುಗಡೆ ಸ್ಥಳದಲ್ಲಿ (ತಳವಾರಘಟ್ಟ) ಟ್ರೈಬ್ಸ್ ಇಂಡಿಯಾದ ಹೊಸ ಮಳಿಗೆ ಬುಧವಾರ ಉದ್ಘಾಟನೆಗೊಂಡಿದೆ. ಭಾರತೀಯ ಪುರಾತತ್ವ ಇಲಾಖೆ ಇದಕ್ಕಾಗಿ 240 ಚದರ ಅಡಿ ವಿಸ್ತೀರ್ಣದ ಜಾಗ ಒದಗಿಸಿಕೊಟ್ಟಿದ್ದು, ದೇಶದ ನಾನಾ ಭಾಗಗಳ ಬುಡಕಟ್ಟು ಜನರು, ಕುಶಲಕರ್ಮಿಗಳು ತಯಾರಿಸಿದಂತಹ ಉತ್ಪನ್ನಗಳು ಇಲ್ಲಿ ಪ್ರವಾಸಿಗರಿಗೆ ಖರೀದಿಗೆ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರ ಸಚಿವಾಲಯದ ಅಡಿಯಲ್ಲಿ ಬರುವ ’ಟ್ರೈಬಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಡೆವಲಪ್ಮೆಂಟ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್’ ವತಿಯಿಂದ ಸ್ಥಾಪನೆಗೊಂಡಿರುವ ಈ ಮಳಿಗೆಯಲ್ಲಿ ಬೀದರ್ನ ಬಿದ್ರಿ ಕಲೆ, ಚಿತ್ರದುರ್ಗದ ಬಾಳೆನಾರಿನ ಪರ್ಸ್, ತಮಿಳುನಾಡು, ರಾಜಸ್ಥಾನ, ಕಾಶ್ಮೀರ, ಛತ್ತೀಸ್ಗಡ, ಮಣಿಪುರ ಸಹಿತ ದೇಶದ ನಾನಾ ಭಾಗಗಳ ಬುಡಕಟ್ಟು ಜನರು ತಯಾರಿಸಿದ ಮಸಾಲೆ ಪದಾರ್ಥಗಳು, ಬಟ್ಟೆ, ತೂಗು ದೀಪಗಳು, ಗಾಜಿನ ಉತ್ಪನ್ನಗಳು, ಹೂದಾನಿ, ಅಲಂಕಾರಿಕ ಸಾಮಗ್ರಿಗಳು ಇಲ್ಲಿ ಲಭ್ಯ ಇದೆ. ₹200ರಿಂದ ₹5 ಸಾವಿರವರೆಗಿನ ಉತ್ಪನ್ನಗಳು ಸದ್ಯ ಇಲ್ಲಿವೆ.
‘ಇದು ಕೇಂದ್ರ ಸರ್ಕಾರ ಬುಡಕಟ್ಟು ಜನರಿಂದ ತಯಾರಿಸಿ, ಅವರಿಂದ ಖರೀದಿಸಿದಂತಹ ಉತ್ಪನ್ನಗಳು. ಇಲ್ಲಿ ಬರುವ ಆದಾಯವೆಲ್ಲವೂ ಬುಡಕಟ್ಟು ಜನರಿಗೇ ಸಂದಾಯವಾಗುತ್ತದೆ. ಬೆಂಗಳೂರಿನಲ್ಲಿ ಈಗಾಗಲೇ ಇಂತಹ ನಾಲ್ಕು ಮಳಿಗೆಗಳು ಆರಂಭವಾಗಿವೆ. ಪ್ರವಾಸಿಗರು ಬಹಳ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸ್ಥಳೀಯರಾದ ನಮ್ಮಿಬ್ಬರಿಗೆ ಉದ್ಯೋಗ ದೊರಕಿದೆ’ ಎಂದು ಮಳಿಗೆಯ ಉಸ್ತುವಾರಿ ವಹಿಸಿಕೊಂಡಿರುವ ಕಮಲಾಪುರದ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯದ ಬುಡಕಟ್ಟು ಜನರು ತಯಾರಿಸಿದಂತಹ ಇನ್ನಷ್ಟು ಉತ್ಪನ್ನಗಳು ಇಲ್ಲಿಗೆ ಬರಲಿವೆ. ಪ್ರವಾಸಿಗರು ಖುಷಿಗೊಂಡಿದ್ದಾರೆ ಖರೀದಿಸುತ್ತಿದ್ದಾರೆ
-ಶಿವಕುಮಾರ್, ಮಳಿಗೆಯ ಉಸ್ತುವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.