ADVERTISEMENT

ಹೊಸಪೇಟೆಯಲ್ಲಿ ವಿಶಿಷ್ಟ ಕಾರ್ಯಕ್ರಮ: ಮಸೀದಿ ನೋಡಲು ಬಂದರು ನೂರಾರು ಮಂದಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:17 IST
Last Updated 27 ಅಕ್ಟೋಬರ್ 2024, 15:17 IST
ಹೊಸಪೇಟೆಯ ಚಪ್ಪರದಹಳ್ಳಿ ಮದೀನಾ ಜಾಮಿಯ ಮಸೀದಿಗೆ ಭಾನುವಾರ ಭೇಟಿ ಜನರಿಗೆ ಇಸ್ಲಾಂ ಧರ್ಮ, ಮಸೀದಿಯ ಕಾರ್ಯವಿಧಾನಗಳ ಮಾಹಿತಿ ನೀಡಲಾಯಿತು
ಹೊಸಪೇಟೆಯ ಚಪ್ಪರದಹಳ್ಳಿ ಮದೀನಾ ಜಾಮಿಯ ಮಸೀದಿಗೆ ಭಾನುವಾರ ಭೇಟಿ ಜನರಿಗೆ ಇಸ್ಲಾಂ ಧರ್ಮ, ಮಸೀದಿಯ ಕಾರ್ಯವಿಧಾನಗಳ ಮಾಹಿತಿ ನೀಡಲಾಯಿತು   

ಹೊಸಪೇಟೆ (ವಿಜಯನಗರ): ಮಸೀದಿಯೊಳಗೆ ಏನಿರುತ್ತದೆ? ಪ್ರಾರ್ಥನೆಯ ವಿಧಾನ ಹೇಗೆ? ಇಸ್ಲಾಂ ಪದದ ಅರ್ಥ ಏನು? ಅಲ್ಲಾಹ್ ಎಂದರೆ ಯಾರು? ಕುರ್‌ಆನ್‌ ಸಾರುವ ಸಂದೇಶ ಏನು? ಹೀಗೆ ಅನ್ಯ ಧರ್ಮೀಯರಿಗೆ ಕಾಡುವ ನಾನಾ ಬಗೆಯ ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಪ್ರಯತ್ನವೊಂದು ನಗರದ ಮಸೀದಿಯೊಳಗೆ ಭಾನುವಾರ ನಡೆಯಿತು.

ಇಲ್ಲಿನ ಚಪ್ಪರದಹಳ್ಳಿಯ ಮದೀನಾ ಜಾಮಿಯ ಮಸ್ಜಿದ್ ಅಹ್ಲೆ ಹದೀಸ್ ಮಸೀದಿಯಲ್ಲಿ ನಡೆದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ನೂರಾರು ಹಿಂದೂಗಳು, ಸಿಖ್ಖರು, ಕ್ರೈಸ್ತರು ಹಾಗೂ ಇತರ ಧರ್ಮೀಯರು ಪಾಲ್ಗೊಂಡು, ಇಸ್ಲಾಂ ಕುರಿತಂತೆ ಇದುವರೆಗೂ ತಿಳಿಯದ  ಹಲವು ಮಾಹಿತಿಗಳನ್ನು ಪಡೆದುಕೊಂಡರು.

ಮಾನವೀಯ ಮನೋಭಾವ ಎತ್ತಿ ಹಿಡಿಯುವ, ಪರಸ್ಪರ ಪ್ರೀತಿ, ಸಹೋದರತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಜಮಿಅತ್ –ಎ–ಅಹ್ಲೆ ಹದೀಸ್‌ ಸಂಘಟನೆ ವತಿಯಿಂದ ನಗರದಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯಿತು. 

ADVERTISEMENT

ಸಮಗ್ರ ಚಿತ್ರಣ ನೀಡಿದ ವಿವರಣೆ: ಮಸೀದಿಯೊಳಗೆ ಕೈಕಾಲು ತೊಳೆದು ಪ್ರವೇಶಿಸುವ ಬಗೆ, ಆಜಾನ್‌ ಕೂಗುವುದು ಏಕೆ? ದಿನಕ್ಕೆ ಎಷ್ಟು ಬಾರಿ ಆಜಾನ್‌ ಕೂಗಲಾಗುತ್ತದೆ ಎಂಬ ಮಾಹಿತಿ ಮೊದಲಿಗೆ ನೀಡಲಾಯಿತು. ಪ್ರತಿಯೊಂದು ವಿಷಯದಲ್ಲೂ ದೊಡ್ಡದಾಗಿ ಬರೆದಂತಹ ಭಿತ್ತಫಲಕ, ಅದರ ಬಳಿಯಲ್ಲಿ ನಿಂತು ವಿವರಣೆ ನೀಡಿದ ವ್ಯಕ್ತಿಗಳು, ಬಂದವರಿಗೆಲ್ಲರಿಗೂ ನಗುಮೊಗದಿಂದಲೇ ಮಾಹಿತಿ ನೀಡುತ್ತಲೇ ಇದ್ದರು. ಮಸೀದಿಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಇಸ್ಲಾಂ ಪದದ ಅರ್ಥ, ನಮಾಜ್ ಮಾಡುವ ವಿಧಾನ, ಕುರ್‌ಆನ್‌ ಯಾವಾಗ ಸೃಷ್ಟಿಯಾಯಿತು? ಪ್ರವಾದಿಗಳೆಂದರೆ ಯಾರು? ಮೊದಲಾದ ಮಾಹಿತಿಗಳನ್ನು ವಿವರವಾಗಿ ನೀಡಲಾಯಿತು.

ಮಸೀದಿಯೊಳಗೆಯೇ ಏಳೆಂಟು ಮಂದಿ ವಿವರಣೆ ನೀಡಿ, ಸಾಮೂಹಿಕ ಪ್ರಾರ್ಥನೆಯ ವಿಧಾನವನ್ನೂ ತೋರಿಸಿಕೊಟ್ಟರು. ಮಸೀದಿಯ ಇನ್ನೊಂದು ಬದಿಯಲ್ಲೂ ಕುರ್‌ಆನ್‌ ನೀಡುವ ಸಂದೇಶಗಳನ್ನು ಇನ್ನಷ್ಟು ವಿವರವಾಗಿ ನೀಡುವ ಪ್ರಯತ್ನ ನಡೆಯಿತು. ಕೊನೆಯಲ್ಲಿ ಇಸ್ಲಾಂ ಧರ್ಮದ ಸಾರವನ್ನು ತಿಳಿಸುವ ಕೈಪಿಡಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತವಾದ ಕುರ್‌ಆನ್‌ ಗ್ರಂಥವನ್ನು ಉಚಿತವಾಗಿ ನೀಡಲಾಯಿತು.

ಶಾಸಕ, ಜಿಲ್ಲಾಧಿಕಾರಿ ಸಹಿತ ಹಲವರ ಭೇಟಿ: ಶಾಸಕ ಎಚ್‌.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿ ಟಿ.ಮಂಜುನಾಥ, ವಾಲ್ಮೀಕಿ– ನಾಯಕ ಸಮಾಜದ ಮುಖಂಡರು, ವೀರಶೈವ– ಲಿಂಗಾಯತ ಸಮಾಜದ ಮುಖಂಡರ ಸಹಿತ ಹಲವಾರು ಮಂದಿ ಮಸೀದಿಗೆ ಭೇಟಿ ನೀಡಿದರು.

ಅಂಜುಮನ್‌ ಕಮಿಟಿ ಅಧ್ಯಕ್ಷರೂ ಆದ ‘ಹುಡಾ’ ಅಧ್ಯಕ್ಷ ಎಚ್‌.ಎನ್‌.ಎಫ್‌. ಮೊಹಮ್ಮದ್ ಇಮಾಮ್‌ ನಿಯಾಜಿ, ವಕ್ಫ್‌ ಬೋರ್ಡ್‌ ಜಿಲ್ಲಾ ಘಟಕದ ಅಧ್ಯಕ್ಷ ದಾದಾಪೀರ್‌, ಮುಖಂಡರಾದ  ಕೆ.ಝಕಾವುಲ್ಲಾ, ಅಬ್ದುಲ್ ಜಬ್ಬಾರ್, ಡಾ. ಹಬೀಬುಲ್ಲಾ, ಮೌಲಾನಾ ಉಮರ್ ಫರೂಕ್‌, ಫಜಲುಲ್ಲಾ ಸಾಬ್‌, ಬಿ.ಹನೀಫ್‌, ಮುಶೀರ್ ಅಹ್ಮದ್‌, ಉಮರ್ ಫರೂಕ್ ಇದ್ದರು.

ಹೊಸಪೇಟೆಯ ಮದೀನಾ ಜಾಮಿಯ ಮಸೀದಿಯಲ್ಲಿ ಭಾನುವಾರ ನಮಾಜ್‌ ಮಾಡುವ ವಿಧಾನದ ಕುರಿತಂತೆ ಧರ್ಮಗುರುಗಳು ಮಾಹಿತಿ ನೀಡಿದರು
ಹೊಸಪೇಟೆಯ ಚಪ್ಪರದಹಳ್ಳಿ ಮದೀನಾ ಜಾಮಿಯ ಮಸೀದಿಗೆ ಭಾನುವಾರ ಭೇಟಿ ನೀಡಿದ ನೂರಾರು ಮಂದಿಗೆ ಕುರ್‌ಆನ್‌ ಕುರಿತು ಮಾಹಿತಿ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.