ಹೊಸಪೇಟೆ (ವಿಜಯನಗರ): ಹೊಸಪೇಟೆ ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಪಾಪಿನಾಯಕನಹಳ್ಳಿ ಏತ ನೀರಾವರಿ ಯೋಜನೆಯ ಭಾಗವಾಗಿ ಇದೇ ಮೊದಲ ಬಾರಿಗೆ 12 ಕೆರೆಗಳು ಭರ್ತಿಯಾಗಿದ್ದು, ಹಲವು ವರ್ಷಗಳ ಕನಸು ನನಸಾಗಿದೆ.
ಶಾಸಕ ಎಚ್.ಆರ್.ಗವಿಯಪ್ಪ ಅವರು ಶನಿವಾರ ಸಂಜೆ ಪಾಪಿನಾಯಕನಹಳ್ಳಿಯ ಅಂಕಲಮ್ಮ ದೇವಸ್ಥಾನ ಬಳಿಯ ಪಂಪ್ಹೌಸ್ನಲ್ಲಿ ಪಂಪ್ಗೆ ಚಾಲನೆ ನೀಡುವ ಮೂಲಕ ಬೆಟ್ಟದ ಮೇಲಿನ ಎರಡು ಕೆರೆಗಳಾದ ಜೋಗಯ್ಯನ ಕೆರೆ, ಶೆಟ್ಟಿ ಕೆರೆಗಳಿಗೆ ನೀರು ಹಾಯಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ಮೂಲಕ ಈ ಭಾಗದ ಜನರ ಬಹುಕಾಲದ ಕನಸನ್ನು ನನಸು ಮಾಡಿದ ಕೃತಜ್ಞತಾ ಭಾವ ಜನರಲ್ಲಿ ಕಾಣಿಸಿತು.
ಮುಂಗಾರಿನ ಆರಂಭದಲ್ಲೇ ಉತ್ತಮ ಮಳೆ ಆಗಿದ್ದ ಕಾರಣ ಜುಲೈ 19ರ ವೇಳೆಗಾಗಲೇ ತುಂಗಭದ್ರಾ ಅಣೆಕಟ್ಟೆ ಬಹುತೇಕ ಭರ್ತಿಯಾಗಿತ್ತು ಮತ್ತು ಜುಲೈ 22ರಿಂದ ಕ್ರಸ್ಟ್ಗೇಟ್ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಆರಂಭಿಸಲಾಗಿತ್ತು. ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಶಾಸಕ ಗವಿಯಪ್ಪ ಅವರು ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಪುತ್ರ ವಿರೂಪಾಕ್ಷ ಅವರಿಂದಲೇ ಜುಲೈ 24ರಂದು ನೀರೆತ್ತುವ ಪಂಪ್ಗಳಿಗೆ ಚಾಲನೆ ಕೊಡಿಸಿದ್ದರು.
ಕಳೆದ ಮೂರು ತಿಂಗಳಲ್ಲಿ ಬಹುತೇಕ 0.30 ಟಿಎಂಸಿ ಅಡಿಯಷ್ಟು ನೀರು 12 ಕೆರೆಗಳಿಗೆ ಹರಿದಿದೆ. ಜತೆಗೆ ಉತ್ತಮ ಮಳೆಯೂ ಆಗಿದೆ. ಹೀಗಾಗಿ ಈ ಎಲ್ಲ ಕೆರೆಗಳೂ ಇದೀಗ ಭರ್ತಿಯಾಗಿವೆ.
‘ನೀರು ಪಂಪ್ ಮಾಡಿದ್ದರಿಂದಲೇ 12 ಕೆರೆಗಳಲ್ಲಿ ಶೇ 30ರಿಂದ 40ರಷ್ಟು ನೀರು ಭರ್ತಿಯಾಗಿತ್ತು. ಮಳೆ ನೀರಿನಿಂದ ಉಳಿದ ಶೇ 60ರಷ್ಟು ನೀರು ಭರ್ತಿಯಾಯಿತು. ಆದರೆ ಗುಡ್ಡದ ಮೇಲಿನ ಎರಡು ಕೆರೆಗಳಿಗೆ ತಳವಾರಘಟ್ಟ ಪಂಪ್ನಿಂದ ನೀರು ಹಾಯಿಸುವುದು ಸಾಧ್ಯವಿರಲಿಲ್ಲ, ಏಕೆಂದರೆ ಪಂಪ್ನ ಹೆಡ್ ಇದಕ್ಕೆ ಸಹಕಾರಿ ಆಗಿರಲಿಲ್ಲ. ಹೀಗಾಗಿ ಪಿ.ಕೆ.ಹಳ್ಳಿ ವಿತರಣಾ ಕೇಂದ್ರದಿಂದ ಪಂಪ್ ಮಾಡಿ ಈ ಎರಡು ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಎಲ್.ಧರ್ಮರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈಗಾಗಲೇ ತುಂಬಿರುವ 12 ಕೆರೆಗಳ ಜತೆಗೆ ಈ ಎರಡು ಕೆರೆಗಳೂ ಕೆಲವೇ ದಿನಗಳಲ್ಲಿ ತುಂಬಲಿವೆ. ಇತರ ಮೂರು ಕೆರೆಗಳು ದುರಸ್ತಿಯಲ್ಲಿದ್ದು, ಮತ್ತೆ ಮೂರು ಕೆರೆಗಳಿಗೆ ಕೆಲವೊಂದು ಅಡೆತಡೆಗಳು ಇವೆ. ಸದ್ಯ 14 ಕೆರೆಗಳಿಗೆ ನೀರು ಹರಿದ ತೃಪ್ತಿಯಂತೂ ಇದ್ದೇ ಇದೆ, ಎಲ್ಲಾ 22 ಕೆರೆಗಳಿಗೂ ನೀರು ಹರಿಸುವ ಗುರಿ ಸಾಧಿಸುವತ್ತ ಪ್ರಯತ್ನ ಸಾಗಿದೆ ಎಂದು ಅವರು ಹೇಳಿದರು.
ಹಬ್ಬದ ಸಂಭ್ರಮ: ಪಿ.ಕೆ.ಹಳ್ಳಿಯಲ್ಲಿ ಶನಿವಾರ ಸಂಜೆ ಒಂದು ರೀತಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಾಜಿ ಸಚಿವ ಆನಂದ್ ಸಿಂಗ್ ಅವರಿಂದ ಯೋಜನೆ ಕಾರ್ಯಗತಗೊಂಡರೂ, ನೀರು ಹರಿದಾಗಲಷ್ಟೇ ಯೋಜನೆಗೆ ಫಲ ದೊರೆತಂತೆ. ಹಾಲಿ ಶಾಸಕ ಗವಿಯಪ್ಪ ಅವರ ಅವಧಿಯಲ್ಲಿ ನೀರು ಹರಿದಿರುವುದನ್ನು ಜನರು ಖಚಿತಪಡಿಸಿಕೊಂಡು ಸಂಭ್ರಮಿಸಿದರು. ಪಟಾಕಿ ಸಿಡಿಸಿದರು, ಸಿಹಿ ಹಂಚಿದರು.
ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ., ನೀರಾವರಿ ಇಲಾಖೆಯ ಎಂಜಿನಿಯರ್ ಎಲ್.ಧರ್ಮರಾಜ್, ಗುತ್ತಿಗೆದಾರ ಕೆ.ಜನಾರ್ಧನ್ ರೆಡ್ಡಿ, ಊರಿನ ಹಿರಿಯರಾದ ಉದ್ವಾಳ್ ಪಂಪಾಪತಿ, ಮೇಟಿ ವಿಜಯಕುಮಾರ್, ಎನ್.ಈಶ್ವರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.