ಆಲಮಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಆರಂಭಗೊಂಡಿದ್ದು, ಆಲಮಟ್ಟಿ ಜಲಾಶಯದ ಮಟ್ಟ ದಿನೇ ದಿನೇ ಏರುತ್ತಿದೆ. ಬುಧವಾರ ಜಲಾಶಯಕ್ಕೆ ಒಂದೇ ದಿನ 27,385 ಕ್ಯೂಸೆಕ್ (2.36 ಟಿಎಂಸಿ ಅಡಿ) ನೀರು ಬಂದಿದೆ.
ಹೆಚ್ಚಿನ ನೀರು ಹರಿದು ಬರುವ ಕಾರಣಲಿ ಆಲಮಟ್ಟಿ ಜಲಾಶಯದ ಹಿನ್ನೀರಿನ ಹಿಪ್ಪರಗಿ ಜಲಾಶಯದ ಎಲ್ಲ ಗೇಟ್ ತೆರೆದು ಬುಧವಾರ ಸಂಜೆಯಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.
ಜಲಾಶಯಕ್ಕೆ ಭಾನುವಾರ 10,557 ಕ್ಯೂಸೆಕ್, ಸೋಮವಾರ 19,978 ಕ್ಯೂಸೆಕ್, ಮಂಗಳವಾರ 24,761 ಕ್ಯೂಸೆಕ್ ಸೇರಿ ಬುಧವಾರದವರೆಗೆ 82,676 ಕ್ಯೂಸೆಕ್ (7.14 ಟಿಎಂಸಿ ಅಡಿ) ನೀರು ಕೇವಲ ನಾಲ್ಕು ದಿನಗಳಲ್ಲಿ ಹರಿದು ಬಂದಿದೆ.
ಜಲಾಶಯದ ಹಿನ್ನೀರಿನಲ್ಲಿ ನೀರಿನ ರಭಸವೂ ಹೆಚ್ಚುತ್ತಿದ್ದು, ಕೆಂಪು ಮಣ್ಣು ಮಿಶ್ರಿತ ನೀರು (ಕೆಂಪು ನೀರು) ಹರಿದು ಬರುತ್ತಿದ್ದು, ಹಿನ್ನೀರು ಕೆಂಪಾಗಿ ನಯನ ಮನೋಹರವಾಗಿ ಕಾಣುತ್ತಿದೆ.
ಆತಂಕ ದೂರ: ಕಳೆದ ವರ್ಷ ಜುಲೈ 14 ರಿಂದ ಒಳಹರಿವು ಆರಂಭಗೊಂಡಿತ್ತು. ಆದರೆ ಈ ಬಾರಿ ತಿಂಗಳು ಮೊದಲೇ ಒಳಹರಿವು ಆರಂಭಗೊಂಡರೂ ಇನ್ನೂ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ.
ಕಳೆದ ವರ್ಷ ಹೊರತುಪಡಿಸಿ ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ ಆಲಮಟ್ಟಿ ಜಲಾಶಯ ಅರ್ಧಕ್ಕೂ ಹೆಚ್ಚು ಭರ್ತಿಯಾಗಿರುತ್ತಿತ್ತು. ಆದರೆ ಈಗ ಜಲಾಶಯ ಕೇವಲ ಶೇ 34 ರಷ್ಟು ಮಾತ್ರ ಭರ್ತಿಯಾಗಿದೆ. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ 41.41ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹಗೊಂಡಿದೆ. ಕಳೆದ ವರ್ಷ ಈ ದಿನದಂದು (3/7/2023) ಜಲಾಶಯದಲ್ಲಿ ಕೇವಲ 19.3 ಟಿಎಂಸಿ ಅಡಿ ನೀರಿತ್ತು.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ ರಭಸವಿಲ್ಲ. ಅಲ್ಲಿ ಪ್ರತಿವರ್ಷ ಈ ಸಮಯದಲ್ಲಿ ನಿತ್ಯ 20 ಸೆಂ.ಮೀ ಗೂ ಹೆಚ್ಚು ಮಳೆಯಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.