ವಿಜಯಪುರ: ನಗರದಲ್ಲಿ ಗುರುವಾರ ಸಂಜೆ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಡಿ ಸಿಲುಕಿ ಮೃತಪಟ್ಟ ದ್ವಿಚಕ್ರ ವಾಹನ ಸವಾರನನ್ನು ಕಾರು ಚಾಲಕ ಎರಡು ಕಿ.ಮೀ.ದೂರ ಎಳೆದೊಯ್ದ ಘಟನೆ ನಡೆದಿದೆ.
‘ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ನಿವಾಸಿ, ವಕೀಲ ರವಿ ಮೇಲಿನಮನಿ (37) ಮೃತರು. ವಿಜಯಪುರದ ಬಸವನಗರದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ರವಿ ಮೇಲಿಮನಿಯವರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಿನಮನಿ ಅವರ ದೇಹ ಕಾರಿನಡಿ ಸಿಲುಕಿದೆ. ರಸ್ತೆಯಲ್ಲಿ ನಿಂತಿದ್ದ ಜನರು ಕೂಗಿದರೂ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಾಲನೆ ಮಾಡಿದ್ದಾನೆ. ಎರಡು ಕಿ.ಮೀ.ದೂರದಲ್ಲಿರುವ ಜಿಲ್ಲಾ ಪಂಚಾಯಿತಿ ಪ್ರವೇಶದ್ವಾರದವರೆಗೆ ಶವನನ್ನು ಎಳೆದೊಯ್ದು, ಅದು ಕಾರಿನಿಂದ ಬೇರ್ಪಟ್ಟ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾದ. ವಕೀಲ ಮೇಲಿನಮನಿ ದೇಹ ಛಿದ್ರವಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಇದೊಂದು ಪೂರ್ವಯೋಜಿತ ಘಟನೆ ಇರಬಹುದು. ರವಿ ಮೇಲಿನಮನಿ ಅವರು ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಅವರ ಸಂಬಂಧಿಕ ಎಂದು ತಿಳಿದುಬಂದಿದೆ. ಎರಡು ವರ್ಷಗಳಿಂದ ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್ನಲ್ಲಿ ವಕೀಲರಾಗಿದ್ದರು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.