ADVERTISEMENT

6 ಜನರ ಬಂಧನ: ₹7.65ಲಕ್ಷ ವಶ

ಧೂಳಖೇಡದಲ್ಲಿ ನಡೆದ ಬ್ಯಾಂಕ್‌ ಕಳವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 14:57 IST
Last Updated 10 ಮಾರ್ಚ್ 2024, 14:57 IST

ಚಡಚಣ:  ‘ಫೆ.28 ರ ಮಧ್ಯರಾತ್ರಿ ಧೂಳಖೇಡ ಗ್ರಾಮದ ಭೀಮಾಶಂಕರ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಶೆಟರ್ಸ್‌ ಒಡೆದು, ₹19.55 ಲಕ್ಷ ನಗದು ದೋಚಿ ಪರಾರಿಯಾಗಿದ್ದ 6 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ₹7.65 ಲಕ್ಷ ನಗದು ಸೇರಿದಂತೆ ₹27.15 ಲಕ್ಷ  ಮೌಲ್ಯದ ವಸ್ತು , ದರೋಡೆಗೆ ಬಳಸಿದ 3 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋುಷಿಕೇಶ್‌ ಸೋನಾವಣೆ ಹೇಳಿದರು

ಸಮೀಪದ ಝಳಕಿ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿದರು.

ಆರೋಪಿಗಳ ಬಂಧನಕ್ಕಾಗಿ ಇಂಡಿ ಡಿವೈಎಸ್ಪಿ ಜಗದೀಶ ಎಚ್‌.ಎಸ್‌ ಮಾರ್ಗದರ್ಶನದಲ್ಲಿ ಚಡಚಣ ಸಿಪಿಐ ಎಚ್‌.ಡಿ.ಮುಲ್ಲಾ ಹಾಗೂ ಪಿಎಸ್‌ಐ ರಾಘವೇಂದ್ರ ಪೋತ ನೇತೃತ್ವದಲ್ಲಿತಂಡ ರಚಿಸಿ, ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿತ್ತು.ಆರೋಪಿಗಳ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸ್‌ ತಂಡ, ಸೋಲಾಪೂರ ಜಿಲ್ಲೆಯ 3 ಜನ, ಹಾಗೂ ಬಾಗಲಕೋಟೆ ಜಿಲ್ಲೆಯ 3 ಜನ ಸೇರಿ ಒಟ್ಟು 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ADVERTISEMENT

‘ದರೋಡೆಗೆ ಬಳಸಲಾದ ಒಂದು ಮಹಿಂದ್ರಾ ಪಿಕ್ಅಪ್‌, ಒಂದು ಕಾರು, ಒಂದು ಬೈಕ್‌ ಹಾಗೂ 6 ಮೊಬೈಲ್‌ಗಳು ಸೇರಿ ಆರೋಪಿಗಳಿಂದ ₹7.65 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಪ್ರೊಬೆಷನರಿ ಎಸ್‌.ಪಿ.ಶಾಲು, ಸಿಪಿಐ ಎಚ್‌.ಡಿ.ಮುಲ್ಲಾ, ತನಿಖಾ ತಂಡದಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ಗಳು,ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.