ADVERTISEMENT

ಬಾಂದಾರಕ್ಕೆ ಕೊನೆಗೂ ಹರಿದ ಕಾಲುವೆ ನೀರು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 13:08 IST
Last Updated 5 ಮಾರ್ಚ್ 2024, 13:08 IST
ಬಸವನಬಾಗೇವಾಡಿ ತಾಲ್ಲೂಕಿನ ಕಾನ್ನಾಳ ಗ್ರಾಮದ ಬಾಂದಾರಕ್ಕೆ ಕಾಲುವೆಯಿಂದ ನೀರು ಬಿಡಲು ತಹಶೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಸಮ್ಮುಖದಲ್ಲಿ ಗ್ರಾಮಸ್ಥರು ಪೈಪ್ ಹಾಕುವ ಕಾರ್ಯ ಮಾಡಿದರು
ಬಸವನಬಾಗೇವಾಡಿ ತಾಲ್ಲೂಕಿನ ಕಾನ್ನಾಳ ಗ್ರಾಮದ ಬಾಂದಾರಕ್ಕೆ ಕಾಲುವೆಯಿಂದ ನೀರು ಬಿಡಲು ತಹಶೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಸಮ್ಮುಖದಲ್ಲಿ ಗ್ರಾಮಸ್ಥರು ಪೈಪ್ ಹಾಕುವ ಕಾರ್ಯ ಮಾಡಿದರು   

ಬಸವನಬಾಗೇವಾಡಿ: ತಾಲ್ಲೂಕಿನ ಕಾನ್ನಾಳ ಗ್ರಾಮದ ಬಾಂದಾರಕ್ಕೆ ಕಳೆದ ಭಾನುವಾರ ಸಂಜೆ ಮುಳವಾಡ ಏತನೀರಾವರಿ ಯೋಜನೆಯ ಸಂಕನಾಳ ಮುಖ್ಯ ಕಾಲುವೆಯಿಂದ ನೀರು ಬಿಡಲು ಅಧಿಕಾರಿಗಳ ಸಮ್ಮುಖದಲ್ಲಿ ಪೈಪ್ ಹಾಕುವ ಮೂಲಕ ನೀರು ಹರಿಸಲಾಯಿತು.

ಕುಡಿಯುವ ನೀರಿನ ತಾಪತ್ರಯ, ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಗ್ರಾಮದಿಂದ ಎರಡು ಕಿ.ಲೋ ಮೀಟರ್ ಅಂತರದಲ್ಲಿರುವ ಈ ಕಾಲುವೆಯಿಂದ ಗ್ರಾಮದ ಬಾಂದಾರಕ್ಕೆ ನೀರು ಬಿಟ್ಟರೆ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಕಾಲುವೆಯಿಂದ ನೀರು ಬಿಡಬೇಕೆಂದು ಆಗ್ರಹಿಸಿ ಪಟ್ಟಣದ ರಾಜ್ಯ ಬಿಜ್ಜಳ ಹೆದ್ದಾರಿಯಲ್ಲಿ ಗ್ರಾಮಸ್ಥರು ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರು. ಈ ಕಾಲುವೆಯಿಂದ 10 ಇಂಚು ಪೈಪ್ ಮೂಲಕ ನೀರು ಬಿಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದುಕೊಂಡಿದ್ದರು.

ಗ್ರಾಮಸ್ಥರ ಹರ್ಷ: ತಹಶೀಲ್ದಾರ್‌ ವೈ.ಎಸ್. ಸೋಮನಕಟ್ಟಿ, ಕೆಬಿಜೆಎನ್ಎಲ್ ಅಧಿಕಾರಿಗಳಾದ ಜಗದೀಶ ಹೊನ್ನಕಸ್ತೂರಿ, ಎನ್.ಎಸ್.ನರಸನಗೌಡರ, ಬಿ.ಟಿ.ದೊಡಮನಿ, ವಿಜಯಕುಮಾರ ಮರಗುಂಡಗಿ ಸಮ್ಮುಖದಲ್ಲಿ ಗ್ರಾಮಸ್ಥರು  ಸ್ವಂತ ಖರ್ಚಿನಲ್ಲಿ ಈ ಕಾಲುವೆಯಿಂದ ಗ್ರಾಮದ ಬಾಂದಾರದವರೆಗೂ ತಗ್ಗು ಅಗೆದು ಪೈಪ್ ಅಳವಡಿಸುವ ಕೆಲಸ ಮಾಡಿದರು. ಸೋಮವಾರ ಕಾಲುವೆಯಿಂದ ನೀರು ಬಾಂದಾರಕ್ಕೆ ಬಂದು ತಲುಪಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ADVERTISEMENT

ಗ್ರಾಮ ಆಡಳಿತಾಧಿಕಾರಿಗಳಾದ ಸಂತೋಷ ಕುಂಟೋಜಿ, ರಮಾನಂದ ಚಕ್ಕಡಿ, ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.