ADVERTISEMENT

‘ವಚನ ದರ್ಶನ’ ಕೃತಿ ಮುಟ್ಟುಗೋಲು ಹಾಕಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 11:02 IST
Last Updated 29 ಸೆಪ್ಟೆಂಬರ್ 2024, 11:02 IST
   

ವಿಜಯಪುರ: ಆರ್‌ಎಸ್‌ ಎಸ್‌ ಸಿದ್ಧಾಂತದ ನೆಲೆಯಲ್ಲಿ ರಚಿಸಲಾಗಿರುವ ‘ವಚನ ದರ್ಶನ’ ಕೃತಿಯ ಮೂಲಕ ಬಸವವಾದಿ ಶರಣರ ವಿಚಾರಧಾರೆಯನ್ನು ಕೇಸರಿಕರಣ ಮಾಡುವ ಹುನ್ನಾರ ನಡೆದಿದೆ. ಈ ಕೃತಿಯನ್ನು ರಾಜ್ಯ ಸರ್ಕಾರ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಾಹಿತಿ, ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವನಚ ದರ್ಶನ’ ಕೃತಿಯ ಹುನ್ನಾರದ ವಿರುದ್ಧ ನಾಡಿನ ಜಾಗೃತ ಮನಸುಗಳು ಒಂದಾಗಿ ದೊಡ್ಡದಾದ ಜನಾಂದೋಲನ ರೂಪಿಸಿ, ಹುನ್ನಾರವನ್ನು ಸೋಲಿಸುವ ಕಾರ್ಯ ಆಗಬೇಕಿದೆ ಎಂದರು.

ಬಸವಣ್ಣನ ಅಂಕಿತನಾಮವನ್ನು ಈ ಹಿಂದೆ ಮಾತೆ ಮಹಾದೇವಿ ತಿರುಚಿದಾಗ ಇಡೀ ಲಿಂಗಾಯತ ಸಮಾಜ ವಿರೋಧ ವ್ಯಕ್ತಪಡಿಸಿತ್ತು. ಅದೇ ಪ್ರತಿರೋಧವನ್ನು ‘ವಚನದರ್ಶನ’ ಕೃತಿಗೆ ತೋರಿಸಬೇಕಾಗಿತ್ತು. ಆದರೆ, ಲಿಂಗಾಯತ ಮಠಗಳು, ಮಠಾಧೀಶರು, ಲಿಂಗಾಯತ ಸಮಾಜದ ಪ್ರಜ್ಞಾವಂತರು ಈ ವಿಷಯದಲ್ಲಿ ಮೌನ ವಹಿಸಿರುವುದು ಖಂಡನೀಯ ಎಂದರು.

ADVERTISEMENT

ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮಾಜ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಹೊರತು ಕಾಂಗ್ರೆಸ್‌ ಕಡೆ ನೋಡುತ್ತಿರುವುದರಿಂದ ಆ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರದ ಒಂದು ಭಾಗ ‘ವಚನ ದರ್ಶನ’ ಕೃತಿಯದಾಗಿದೆ. ಧಾರ್ಮಿಕ ಕಾರಣಕ್ಕಾಗಿ ಅಲ್ಲ, ರಾಜಕೀಯ ಮೇಲುಗೈ ಸಾಧಿಸುವ ಉದ್ದೇಶ ಇದರಲ್ಲಿ ಅಡಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಹೇಳಿದರು.

ಲಿಂಗಾಯತ ಅಸ್ಮಿತೆ ಉಳಿಸಿಕೊಳ್ಳಲು ನಾಡಿನ ಪ್ರಜ್ಞಾವಂತ ಮಠಾಧೀಶರು, ಲಿಂಗಾಯತ ಸಂಘ, ಸಂಸ್ಥೆಗಳು ‘ವಚನ ದರ್ಶನ’ ಕೃತಿಯ ವಿರುದ್ಧ ಧ್ವನಿ ಎತ್ತಬೇಕಿದೆ. ಪ್ರತಿಭಟನೆ ನಡೆಸಬೇಕಿದೆ ಎಂದು ಅವರು ಕರೆ ನೀಡಿದರು.

ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮವನ್ನು ಹಿಂದು ಧರ್ಮದಲ್ಲಿ ಲೀನವಾಗಿಸುವ ಪ್ರಯತ್ನ ಈ ಕೃತಿಯಲ್ಲಿ ಇದೆ. ಹಿಂದು ಧರ್ಮಕ್ಕೆ ಪ್ರತಿರೋಧ ಮತ್ತು ಪರ್ಯಾಯಗಳನ್ನು ತೋರುವವರನ್ನು ಹಿಂದು ಧರ್ಮದಲ್ಲಿ ಲೀನವಾಗಿಸಿಕೊಳ್ಳುವ ಪ್ರಯತ್ನಗಳು ಈ ಮೊದಲಿನಿಂದಲೂ ನಡೆದಿವೆ. ಉದಾಹರಣೆಗೆ ಹಿಂದು ಧರ್ಮಕ್ಕೆ ಪ್ರತಿರೋಧ ತೋರಿದ ಬುದ್ಧನನ್ನು ವಿಷ್ಣುವಿನ 11ನೇ ಅವತಾರ ಎನ್ನಲಾಗಿದೆ. ಅದೇ ರೀತಿ ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರಧಾರೆಗಳನ್ನು ತಿರುಚಿ, ಹಿಂದು ಧರ್ಮದ ಪರವಾಗಿದ್ದರು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಸಂಘಪರಿವಾರ, ಬಿಜೆಪಿ ಸೇರಿಕೊಂಡು ಧಾರ್ಮಿಕ ನಾಯಕರನ್ನು, ಮಠಾಧೀಶರನ್ನು ಭ್ರಷ್ಟಗೊಳಿಸುವ ಮತ್ತು ಅವರ ನೈತಿಕತೆ ಹಾಳು ಮಾಡುವ ಕೆಲಸ ಮಾಡಿದೆ. ಬಿಜೆಪಿ, ಸಂಘಪರಿವಾರ ಸೇರಿಕೊಂಡು ಲಿಂಗಾಯತರ ಅಸ್ಥಿತ್ವವನ್ನೇ ನಾಶ ಮಾಡುವ ಕೆಲಸ ನಿರಂತರವಾಗಿ ನಡೆಸಿವೆ ಎಂದು ಹೇಳಿದರು.

‌ವಕೀಲ ನಾಗರಾಜ ಲಂಬು, ಪತ್ರಕರ್ತ ಅನಿಲ ಹೊಸಮನಿ, ಪ್ರಮುಖರಾದ ಮೋಹನ ಕಟ್ಟಿಮನಿ, ರಾಜೇಶ್ವರಿ ಯರನಾಳ, ಪ್ರಭುಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.