ADVERTISEMENT

ಸರ್ಕಾರವನ್ನು ಸಮರ್ಥವಾಗಿ ಕಟ್ಟಿ ಹಾಕುವಲ್ಲಿ ಪ್ರತಿಪಕ್ಷವಾಗಿ BJP ವಿಫಲ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:00 IST
Last Updated 1 ಜುಲೈ 2024, 16:00 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರು ಸಾಲು ಹಗರಣಗಳಲ್ಲಿ ಭಾಗಿಯಾದರೂ ಅವುಗಳನ್ನು ಬಯಲಿಗೆಳೆದು, ಸರ್ಕಾರವನ್ನು ಸಮರ್ಥವಾಗಿ ಕಟ್ಟಿ ಹಾಕುವಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ವಿಫಲವಾಗಿದೆ’ ಎಂದು  ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕೇವಲ ಜೈಲ್‌ ಭರೋ, ಧಿಕ್ಕಾರ ಕೂಗಿದರೆ ಸಾಲದು. ಕಾಂಗ್ರೆಸ್‌ ಸರ್ಕಾರವನ್ನು ಸಮರ್ಥವಾಗಿ ಕಟ್ಟಿಹಾಕುವ ಕೆಲಸ ಮಾಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ನಮ್ಮವರು ಜೈಲ್‌ ಭರೋ ಮಾಡಲು ಹೋದಾಗ ಪೊಲೀಸರು ಅವರನ್ನು ಹಿಡಿದು ಬಸ್‌ ಒಳಗೆ ಕೂರಿಸಿ ಸೆಲ್ಯೂಟ್ ಹೊಡೆದು, ಕಾಫಿ, ಟೀ ಕುಡಿಸಿ, ಇಡ್ಲಿ, ದೋಸೆ ತಿನ್ನಿಸಿ ಹೊರಗೆ ಬಿಡುತ್ತಾರೆ. ಹೊರಬಂದ ಬಳಿಕ ನಮ್ಮವರು ಭಾರಿ ಹೋರಾಟ ಮಾಡಿದ್ದೇವೆ, ಉಗ್ರ ಹೋರಾಟ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ’ ಎಂದು ಛೇಡಿಸಿದರು.

ADVERTISEMENT

‘ನಮ್ಮ ಹುಳುಕು ನೀವು ತೆಗೆಯಬೇಡಿ, ನಿಮ್ಮ ಹುಳುಕು ನಾವು ತೆಗೆಯಲ್ಲ ಎಂದು ಕಾಂಗ್ರೆಸ್‌ ಸಚಿವರು ಬೆದರಿಕೆ ಹಾಕುತ್ತಿದ್ದಾರೆ. ಅದಕ್ಕೆ ಅಂಜಿ ನಮ್ಮ ನಾಯಕರು ಕೇವಲ ತೋರಿಕೆಗೆ ಹೋರಾಟ ನಡೆಸುತ್ತಿದ್ದಾರೆ’ ಎಂದರು.

‘ನನಗೂ ಅಂಜಿಸಲು ಬಂದರು. ಆದರೆ, ನನ್ನದು ಯಾವ ಹುಳುಕು ಅವರಿಗೆ ಸಿಗದ ಕಾರಣಕ್ಕೆ ತಲೆನೋವು ಆಗಿದ್ದೇನೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್‌ನ ಹಲವು ಹಗರಣಗಳನ್ನು ಬಿಚ್ಚಿಡುತ್ತೇನೆ. ವಾಲ್ಮೀಕಿ ನಿಗಮದಲ್ಲಿ ಆಗಿರುವ ಬಹು ಕೋಟಿ ಹಗರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ಕೊಡಬೇಕು, ಭ್ರಷ್ಟಾಚಾರ ಮಾಡಿದವರು ಜೈಲಿಗೆ ಹೋಗಬೇಕು, ಇಲ್ಲವಾದರೆ ನಾನೇ ಪಿಐಎಲ್‌ ಹಾಕುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.