ADVERTISEMENT

ವಿಜಯಪುರ | ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 5:35 IST
Last Updated 7 ಜುಲೈ 2024, 5:35 IST
   

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಪೋಟವಾಗಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಸ್ಫೋಟವಾದ ಬಾಯ್ಲರ್ ಬಳಿಯೇ 15 ಕಾರ್ಮಿಕರು ಕೆಲಸ ಮಾಡುತ್ತಿದ್ದರು‌. ಟೀ ಕುಡಿಯಲು ಹೊರಗೆ ಹೊರಟಾಗ ಏಕಾಏಕಿ ಬಾಯ್ಲರ್ ಸ್ಪೋಟವಾಗಿದ್ದು, ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದಾರೆ.

ಮುಂಬರುವ ಹಂಗಾಮಿಗೆ ಕಬ್ಬು ನುರಿಸಲು ಕಾರ್ಖಾನೆಯ ಯಂತ್ರಗಳನ್ನು ಸಿದ್ಧತೆ ಮಾಡುವ ವೇಳೆ ಬಾಯ್ಲರ್ ಸ್ಫೋಟವಾಗಿದೆ.

ADVERTISEMENT

ವರ್ಷದ ಹಿಂದೆ ಅಂದರೆ, 2023ರ ಮಾರ್ಚ್ 4 ರಂದು ಇದೇ ಸಕ್ಕರೆ ಕಾರ್ಖಾನೆಯ ಮತ್ತೊಂದು ಬಾಯ್ಲರ್ ಸ್ಫೋಟವಾಗಿ, ಒಬ್ಬ ಕಾರ್ಮಿಕ ಸಾವಿಗೀಡಾಗಿ, ನಾಲ್ಕು ಜನ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು.

ಈ‌ ಹಿಂದಿನ ಆಡಳಿತ ಮಂಡಳಿಯು ಕಳಪೆ ಗುಣಮಟ್ಟದ ಬಾಯ್ಲರ್ ಕೂರಿಸಿರುವುದೇ ಸ್ಫೋಟಕ್ಕೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.

₹ 50 ಕೋಟಿ ವೆಚ್ಚದಲ್ಲಿ ಬಾಯ್ಲರ್ ಗಳನ್ನು ನಿರ್ಮಾಣ ಮಾಡಿಸಲಾಗಿತ್ತು.

ತಾಂತ್ರಿಕ ಅನುಭವ ಇಲ್ಲದ‌ ಪುಣೆ ಮೂಲದ ಎಸ್. ಎಸ್. ಎಂಜಿನಿಯರಿಂಗ್ ಅವರಿಂದ ಮಾಡಿಸಿರುವುದೇ ಸ್ಫೋಟಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

'ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಕಾರ್ಖಾನೆಯಲ್ಲಿ ನಡೆದಿರುವ ಎಲ್ಲ ಕಾಮಗಾರಿಗಳು ಹಾಗೂ ಬಾಯ್ಲರ್ ಬ್ಲಾಸ್ಟ್ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು' ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.