ತಿಕೋಟಾ: ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ನ 51ನೇ ಯುನಿಟ್ ಮಹರ ರೆಜಿಮೆಂಟ್ 13 ಜಮ್ಮು ಕಾಶ್ಮಿರದಲ್ಲಿ ಹುತಾತ್ಮರಾದ ವೀರಯೋಧ ರಾಜು ಗಿರಮಲ್ಲ ಕರಜಗಿ ಅವರ ಪಾರ್ಥಿವ ಶರೀರ ಹುಟ್ಟೂರು ತಿಕೋಟಾಕ್ಕೆ ಬುಧವಾರ ಬೆಳಿಗ್ಗೆ ಆಗಮಿಸುತ್ತಿದ್ದಂತೆ ‘ರಾಜು ಅಮರ ರಹೇ’, ‘ಬೊಲೊ ಭಾರತ ಮಾತಾಕಿ ಜೈ’ ಎಂಬ ಘೋಷಣೆಗಳು ಮೊಳಗಿದವು.
ಪಾರ್ಥಿವ ಶರೀರ ವಾಡ ಮೈದಾನಕ್ಕೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು. ಹೆತ್ತ ತಾಯಿ ‘ನನ್ನ ರಾಜಾ, ನನ್ನ ರಾಜಕುಮಾರ’ ಎಂದು ಆರೋದಿಸಿದಾದ ನೆರೆದ ಜನರ ಕಣ್ಣುಗಳು ತೇವಗೊಂಡವು. ಪತ್ನಿ, ಸಹೋದರ, ಮಾವ ಹಾಗೂ ಸಂಬಂಧಿಕರು ವೀರಯೋಧನ ಒಡನಾಟ ನೆನಪಿಸಿಕೊಂಡು ಕಣ್ಣೀರು ಹಾಕಿದರು.
ಪಟ್ಟಣದ ವಾಡೆ ಮೈದಾನದಲ್ಲಿ ಮದ್ಯಾಹ್ನ 1ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು, ಶಾಲಾ ಮಕ್ಕಳು, ಸುತ್ತಲಿನ ಹಳ್ಳಿಯ ಜನರು ಅಂತಿಮ ದರ್ಶನ ಪಡೆದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಹುಲಜಂತಿ ಮಾಳಿಂಗರಾಯ ಮಹಾರಾಜ, ಬಾಬುರಾವ ಮಹಾರಾಜ, ಮಾಜಿ ಸೈನಿಕರು, ಶಾಲಾ ಕಾಲೇಜಿನ ಮಕ್ಕಳು, ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಮೆರವಣಿಗೆ: ಹೂಗಳಿಂದ ಸಿಂಗಾರಗೊಂಡ ತೆರೆದ ವಾಹನದಲ್ಲಿ ಮದ್ಯಾಹ್ನ 1ಕ್ಕೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯಿತು. ದಾರಿಯುದ್ದಕ್ಕೂ ದೇಶ ಭಕ್ತಿಗೀತೆಗಳು, ಮತ್ತೆ ಹುಟ್ಟಿ ಬಾ ರಾಜು, ‘ಅಮರ ರಹೇ ಹೈ ರಾಜು’ ಮುಂತಾದ ಘೋಷಣೆಗಳು ಮೊಳಗಿದವು. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ತಲುಪಿತು.
ಗೌರವ ವಂದನೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಶಸ್ತ್ರ ಮೀಸಲು ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿತು.
ಧ್ವಜ ಹಸ್ತಾಂತರ: ಪಾರ್ಥಿವ ಶರೀರದ ಮೇಲೆ ಹೊದಿಸಿರುವ ರಾಷ್ಟ್ರ ದ್ವಜವನ್ನು ಪತ್ನಿ ಸುಧಾ ಅವರಿಗೆ ಸೇನೆಯ ಹಿರಿಯ ಅಧಿಕಾರಿಗಳು ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.