ಮುದ್ದೇಬಿಹಾಳ: ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು. ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ಒದಗಿಸುವುದು, ಮುಖ್ಯ ಶಿಕ್ಷಕರ ಮುಂಬಡ್ತಿ ಹಾಗೂ ಇನ್ನೀತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಗುರುವಾರ ಬಿಇಒ ಕಚೇರಿಗೆ ಆಗಮಿಸಿ ಬಿಇಒ ಬಿ.ಎಸ್.ಸಾವಳಗಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಸ್.ಎಸ್. ಲಮಾಣಿ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ಅಲ್ಲಿಯವರೆಗೆ ಖಾಲಿ ಇರುವ ಸ್ಥಳದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು, ದೈಹಿಕ ಶಿಕ್ಷಣ ಪಠ್ಯಕ್ರಮ ಇರುವುದರಿಂದ ಎಸ್ಎಟಿಎಸ್ನಲ್ಲಿ ‘ಎ’ ಭಾಗದಲ್ಲಿ ಸೇರ್ಪಡೆ ಮಾಡುವುದು, ದೈಹಿಕ ಶಿಕ್ಷಣ ಶಿಕ್ಷಕರ ಹೆಸರುಗಳನ್ನು ಸೇವಾ ಜೇಷ್ಠತಾ ಆಧಾರದ ಮೇಲೆ ಬರೆಯುವುದು, ದೈಹಿಕ ಶಿಕ್ಷಣ ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ವೇತನ ಸಹಿತ ಅನುಮತಿ ನೀಡುವುದು ಮಾಡಬೇಕು ಎಂದರು.
ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ಕೆರೂರ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಗಳ ಕಚೇರಿಯಲ್ಲಿ ದೈಹಿಕ ಶಿಕ್ಷಣ ಸಂಯೋಜಕರು, ಸಹಾಯಕ ದೈಹಿಕ ಶಿಕ್ಷಣ ಪರೀಕ್ಷಕರ ಹುದ್ದೆ ಸೃಷ್ಟಿಸಿ ಮುಂಬಡ್ತಿ ನೀಡುವುದು, ಪ್ರತಿಯೊಂದು ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯವಾಗಿ ದೈಹಿಕ ಶಿಕ್ಷಕರ ನೇಮಕಾತಿ ಮಾಡುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಬಿಇಒ ಮೂಲಕ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು. ಸಂಘದ ಗೌರವ ಅಧ್ಯಕ್ಷರಾದ ಸಿ.ಎಸ್ . ಮನಗೂಳಿ, ಕಾರ್ಯದರ್ಶಿ ಎಂ.ಎಸ್ .ನಾಟಿಕರ, ಉಪಾಧ್ಯಕ್ಷ ಬಿ.ಎಸ್. ವಂದಾಲ, ಎಸ್ .ಆರ್. ಸುಲ್ಪಿ, ವಿ. ಎಸ್.ತೆಗ್ಗಿ, ಬಸವರಾಜ್ ರಾಮೋಡಗಿ, ಬಿ.ಎಸ್ .ಭಜಂತ್ರಿ, ಎಸ್ .ಎಸ್ .ಹಿರೇಮಠ, ಎಸ್.ಎಸ್.ಅಂಗಡಿ, ಎಸ್.ಎಂ.ಇದ್ದಲಗಿ, ಎನ್.ಎಂ .ಮುದಗಲ್, ವಿ.ಜಿ.ನಾಗರಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.