ಆಲಮಟ್ಟಿ (ವಿಜಯಪುರ ಜಿಲ್ಲೆ): ಆಲಮಟ್ಟಿ ಅಣೆಕಟ್ಟೆ ಕೆಳಭಾಗದ ಮೊಘಲ್ ಉದ್ಯಾನದ ಬಳಿ ಬೃಹತ್ ಮೊಸಳೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದು ನದಿಗೆ ಬಿಟ್ಟರು.
ಮೊಘಲ್ ಉದ್ಯಾನದಲ್ಲಿ ಮೊಸಳೆ ಇರುವುದು ಸೋಮವಾರ ತಡರಾತ್ರಿ ಕಾವಲು ಕಾಯುತ್ತಿದ್ದ ಪೊಲೀಸರ ಗಮನಕ್ಕೆ ಬಂತು. ಅವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ರಾತ್ರಿಯಿಡೀ ನಿಗಾ ವಹಿಸಿ, ಮುದ್ದೇಬಿಹಾಳದಿಂದ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸಹಯೋಗದಲ್ಲಿ ಮಂಗಳವಾರ ನಸುಕಿನಲ್ಲಿ ಮೊಸಳೆ ಸೆರೆ ಹಿಡಿಯಲಾಯಿತು.
‘10 ಅಡಿ ಉದ್ದ ಮತ್ತು 2 ಕ್ವಿಂಟಲ್ಗೂ ಹೆಚ್ಚು ತೂಕವಿದ್ದ ಬೃಹತ್ ಮೊಸಳೆ ಭಾರಿ ಪ್ರತಿರೋಧ ತೋರಿತು. ಒಂದೂವರೆ ಗಂಟೆ ಬಳಿಕ, ಅದಕ್ಕೆ ಉರುಲು ಹಗ್ಗ ಹಾಕಿ ಸೆರೆಹಿಡಿಯಲು ಹರಸಾಹಸ ಪಟ್ಟೆವು. ನಂತರ ಸಿಬ್ಬಂದಿಯ ನೆರವಿನಿಂದ ಅದನ್ನು ಎತ್ತಿ ಟ್ರ್ಯಾಕ್ಟರ್ನಲ್ಲಿ ಹಾಕಿದೆವು. ಆಲಮಟ್ಟಿ ಜಲಾಶಯದ ಬಾಗಿನ ಬಿಡುವ ಸ್ಥಳದ ಬಳಿ ಮೊಸಳೆಯನ್ನು ಸುರಕ್ಷಿತವಾಗಿ ಕೃಷ್ಣಾ ನದಿಗೆ ಬಿಡಲಾಯಿತು’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.
ಮೊಸಳೆ ಹಿಡಿಯುವುದರಲ್ಲಿ ನಿಪುಣರಾದ ನಾಗೇಶ ವಡ್ಡರ, ಅರಣ್ಯ ಇಲಾಖೆ ಸಿಬ್ಬಂದಿಯಾದ ಸತೀಶ ಗಲಗಲಿ, ಬಸವರಾಜ ಕೊಣ್ಣೂರ, ಈಶ್ವರ, ಪ್ರವೀಣ ಹಚ್ಯಾಳಕರ, ವಿಜಲಯಲಕ್ಷ್ಮಿ ರೆಡ್ಡಿ, ವಿರೂಪಾಕ್ಷಿ ಮಾದರ ಕಾರ್ಯಾಚರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.