ವಿಜಯಪುರ: ನಗರ ಹಿರಿಯ ಪತ್ರಿಕಾ ಏಜೆಂಟರಾಗಿದ್ದ ಮಲ್ಲಪ್ಪ ಮಂಗಾನವರ (72) ಮಂಗಳವಾರ ಬೆಳಿಗ್ಗೆ ನಿಧನರಾದರು.
ಅವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಸಂಜೆ ಅವರ ಸ್ವಗ್ರಾಮವಾದ ಬಸವನ ಬಾಗೇವಾಡಿ ತಾಲ್ಲೂಕಿನ ಯಂಭತ್ನಾಳದಲ್ಲಿ ಅಂತ್ಯಕ್ರಿಯೆ ನೆರವೇರಿತು.
50 ವರ್ಷಗಳಿಂದ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಸುಧಾ, ಮಯೂರ ಸೇರಿದಂತೆ ವಿವಿಧ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಪತ್ರಿಕೆಗಳ ಏಜನ್ಸಿ ಮಾಡುವ ಮೂಲಕ ಪ್ರಸಿದ್ದರಾಗಿದ್ದರು.
ಪತ್ರಿಕಾ ಏಜೆಂಟರಾಗಿ ವಿಜಯಪುರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮಂಗಾನವರ ಅವರು ಕ್ಷೇತ್ರಕ್ಕೆ ಮಾದರಿಯಾಗಿದ್ದರು. ಪತ್ರಿಕಾ ಏಜೆಂಟರಾಗಿ ಉತ್ತಮ ಬದುಕುಕೊಟ್ಟಿಕೊಂಡಿದ್ದ ಅವರು, ನೂರಾರು ಜನರಿಗೆ ಉದ್ಯೋಗ ಕೊಟ್ಟಿದ್ದರು. ತಮ್ಮ ಕಾಯಕ ನಿಷ್ಠೆಯಿಂದ ಪತ್ರಕರ್ತರು, ಓದುಗರು, ಪತ್ರಿಕಾ ಸಂಸ್ಥೆಗಳು, ಮಾಲೀಕರ ಪ್ರೀತಿಗೆ ಪಾತ್ರವಾಗಿದ್ದರು.
ಪತ್ರಿಕೆಗಳ ಖರೀದಿ, ಮಾರಾಟದಲ್ಲಿ ಪ್ರಾಮಾಣಿಕ ಲೆಕ್ಕಾಚಾರಕ್ಕೆ ಆದ್ಯತೆ ನೀಡಿದ್ದ ಅವರು, ಓದುಗರಿಂದ ಪತ್ರಿಕೆ ಬಿಲ್ ಸಂಗ್ರಹ ಮಾಡುವುದರಲ್ಲಿ ಹಾಗೂ ಪತ್ರಿಕಾ ಸಂಸ್ಥೆಗಳಿಗೆ ಅವಧಿಗೂ ಮೊದಲೇ ಪ್ರತಿ ತಿಂಗಳು ಬಿಲ್ ಪಾವತಿಸುವಲ್ಲಿ ಶಿಸ್ತು ಮೂಡಿಸಿಕೊಂಡಿದ್ದರು. ಒಂದು ಪೈಸೆಯೂ ವ್ಯತ್ಯಾಸವಾಗದಂತೆ ಲೆಕ್ಕಾಚಾರ ಮಾಡುತ್ತಿದ್ದರು. ಈ ಕಾರಣಕ್ಕೆ ಬಹಳಷ್ಟು ಪತ್ರಿಕಾ ಸಂಸ್ಥೆಗಳು ಅವರಿಂದ ಠೇವಣಿ ತೆಗೆದುಕೊಳ್ಳದೇ ಅವರ ಹೆಸರಿಗೆ ಪತ್ರಿಕೆಗಳನ್ನು ಕೇಳಿದಷ್ಟು ಕಳುಹಿಸುವಷ್ಟು ವಿಶ್ವಾಸ ಇಟ್ಟುಕೊಂಡಿದ್ದರು.
ದೀಪಾವಳಿ ಸಂದರ್ಭದಲ್ಲಿ ತಮ್ಮ ಜೊತೆಗೆ ಕೆಲಸ ಮಾಡುವ ಹುಡುಗರಿಗೆ ಹೊಸಬಟ್ಟೆ ಕೊಡಿಸುವ ಸಂಪ್ರದಾಯ ಇಟ್ಟುಕೊಂಡವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.