ADVERTISEMENT

ಮಹಾಬಲೇಶ್ವರದಲ್ಲಿ ಕೃಷ್ಣೆಗೆ ಬಾಗಿನ ಸಮರ್ಪಣೆ

ಕೃಷ್ಣೆ ಮೈದುಂಬಲಿ, ರೈತರು ಸಮೃದ್ಧರಾಗಲಿ; ಮಾಜಿ ಸಚಿವ ಬೆಳ್ಳುಬ್ಬಿ ಆಶಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 14:31 IST
Last Updated 21 ಜುಲೈ 2024, 14:31 IST
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಹಾಬಲೇಶ್ವರದ ಕೃಷ್ಣಾ ನದಿಯ ಉಗಮ ಸ್ಥಾನದಲ್ಲಿ ಭಾನುವಾರ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಬಾಗಿನ ಅರ್ಪಿಸಿದರು 
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಹಾಬಲೇಶ್ವರದ ಕೃಷ್ಣಾ ನದಿಯ ಉಗಮ ಸ್ಥಾನದಲ್ಲಿ ಭಾನುವಾರ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಬಾಗಿನ ಅರ್ಪಿಸಿದರು    

ಮಹಾಬಲೇಶ್ವರ (ಮಹಾರಾಷ್ಟ್ರ): ಸಾತಾರಾ ಜಿಲ್ಲೆಯ ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾನುವಾರ ಬೆಳಿಗ್ಗೆ ಗುರುಪೂರ್ಣಿಮೆ ಅಂಗವಾಗಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ನೂರಾರು ರೈತರು ಬಾಗಿನ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಸಂಪ್ರದಾಯದಂತೆ ಬೆಳ್ಳುಬ್ಬಿ ದಂಪತಿ ಪಂಚಗಂಗಾ ಸನ್ನಿಧಾನದಲ್ಲಿ ಬಾಗಿನ ಸಮರ್ಪಿಸಿ, ಗಾಯತ್ರಿ, ಸಾವಿತ್ರಿ, ಕೃಷ್ಣಾ, ಕೊಯ್ನಾ, ವೆನ್ನಾ ನದಿಗಳ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಳೆಯನ್ನು ಲೆಕ್ಕಿಸದೇ ನೂರಾರು ರೈತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

‘ಕೃಷ್ಣೆ ಮೈದುಂಬಿ ಹರಿಯಲಿ, ರೈತರ ಬಾಳು ಸಮೃದ್ಧವಾಗಲಿ, ಎಲ್ಲೆಡೆ ಸುಖ ಶಾಂತಿ ನೆಲೆಸಲಿ’ ಎಂದು ಎಸ್.ಕೆ.ಬೆಳ್ಳುಬ್ಬಿ ಆಶಯ ವ್ಯಕ್ತಪಡಿಸಿದರು.

ADVERTISEMENT

‘ಕೃಷ್ಣಾ ಉತ್ತರ ಕರ್ನಾಟಕದ ಜೀವನದಿ. ಅನ್ನದಾತರ ಪಾಲಿನ ದೇವತೆ. ರೈತರೊಂದಿಗೆ ಪ್ರತಿ ವರ್ಷ ಕೃಷ್ಣೆಯ ಉಗಮ ಸ್ಥಾನಕ್ಕೆ ಬಂದು ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿ ಉತ್ತಮ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ’ ಎಂದರು.

ಚಲನಚಿತ್ರ ನಿರ್ದೇಶಕ ಮಧುಸೂದನ ಹವಾಲ್ದಾರ ಮಾತನಾಡಿ, ‘ಗುರುಪೂರ್ಣಿಮೆ ಅತ್ಯಂತ ಮಹತ್ವದ ದಿನವಾಗಿದೆ. ನಮ್ಮ ಬದುಕಿಗೆ ಗುರುವಾದ ಎಲ್ಲರನ್ನೂ ಸ್ಮರಿಸುವ ಈ ದಿನದಂದು ಬಾಗಿನ ಸಮರ್ಪಣೆ ಸ್ತುತ್ಯಾರ್ಹ ಕಾರ್ಯವಾಗಿದೆ ಎಂದರು.

‘ನಮ್ಮ ಮಾತಾಂಬುಜಾ ಮೂವೀಸ್ ನಿಂದ ಮುಂದಿನ ದಿನಗಳಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಜನಪರ ಕಾರ್ಯಗಳ ಕುರಿತು ‘ಸಾಧನೆ’ ಕಿರುಚಿತ್ರ ರೂಪಿಸಲಾಗುತ್ತಿದ್ದು, ಈ ಕಾರ್ಯಕ್ಕೂ ಈ ಪುಣ್ಯ ನೆಲದಲ್ಲೇ ಚಾಲನೆ ನೀಡಲಾಗಿದೆ’ ಎಂದರು.

ಕೊಲ್ಹಾರದ ಕೈಲಾಸನಾಥ ಸ್ವಾಮೀಜಿ, ಚಿನ್ನಪ್ಪ ಗಿಡ್ಡಪ್ಪಗೋಳ, ಕೊಲ್ಹಾರ ಪ.ಪಂ. ಸದಸ್ಯ ಶ್ರೀಶೈಲ ಅಥಣಿ, ಬಾಬು ಬಜಂತ್ರಿ, ಅಪ್ಪಾಸಿ ಮಟ್ಟ್ಯಾಳ, ಕಲ್ಲಪ್ಪ ಸೊನ್ನದ, ಶೇಖಪ್ಪ ಗಾಣಿಗೇರ, ಶ್ರೀಕಾಂತ ಬರಗಿ, ಬಸಪ್ಪ ಗಾಜಿ, ಪರಶುರಾಮ ಗಣಿ, ನಾಮದೇವ ಪವಾರ, ನಿಂಗು ಬಿದರಿ, ಶ್ರೀಶೈಲ ಓಡಗಲ್ಲ, ಚಲನಚಿತ್ರ ವಿತರಕ ರಾಮಚಂದ್ರರಾವ್ ಕುಲಕರ್ಣಿ, ಮುತ್ತು ಕೋಡಬಾಗಿ, ಕೊಲ್ಹಾರ, ಮಸೂತಿ, ಮಟ್ಟಿಹಾಳ, ಆಸಂಗಿ, ಗಣಿ ಗ್ರಾಮಗಳು ಹಾಗೂ ಅವಳಿ ಜಿಲ್ಲೆಯ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.