ADVERTISEMENT

ಇಂಡಿ | ರಕ್ಷಣಾ ಕಾರ್ಯ: ಪರಿಶ್ರಮಕ್ಕೆ ಸಿಗದ ಪ್ರತಿಫಲ

ಐದು ತಿಂಗಳಾದರೂ ಜಿಲ್ಲಾಡಳಿತದಿಂದ ಸಿಗದ ಸ್ಪಂದನೆ

ಎ.ಸಿ.ಪಾಟೀಲ
Published 28 ಆಗಸ್ಟ್ 2024, 21:30 IST
Last Updated 28 ಆಗಸ್ಟ್ 2024, 21:30 IST
ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ ಸಾತ್ವಿಕನ ರಕ್ಷಣೆಗಾಗಿ ನಡೆಸಿದ್ದ ಕಾರ್ಯಾರಣೆಯ ಸ್ಥಳ
ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ ಸಾತ್ವಿಕನ ರಕ್ಷಣೆಗಾಗಿ ನಡೆಸಿದ್ದ ಕಾರ್ಯಾರಣೆಯ ಸ್ಥಳ   

ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆಬಾವಿಯಲ್ಲಿ ಬಿದ್ದಿದ್ದ ಎರಡು ವರ್ಷದ ಬಾಲಕನನ್ನು ರಕ್ಷಿಸಲು 22 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿತ್ತು. ಆದರೆ ಈ ಕಾರ್ಯಾಚರಣೆಗೆ ಮತ್ತು ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲ 5 ತಿಂಗಳಾದರೂ ಇನ್ನೂ ಸಿಕ್ಕಿಲ್ಲ. ಇದಕ್ಕೆ ಪೂರಕವಾಗಿ ಮನವಿ ಸಲ್ಲಿಸಿದರೂ ಜಿಲ್ಲಾಡಳಿತದಿಂದ ಸ್ಪಂದನೆ ಸಿಕ್ಕಿಲ್ಲ.

ಇದೇ ವರ್ಷ ಏಪ್ರಿಲ್ 3ರಂದು ಕೊಳವೆಬಾವಿಯಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗೆ ಜಿಲ್ಲಾ, ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಅಂದು ನೆರವಾದ ವಾಹನ, ಯಂತ್ರಗಳ ಮಾಲೀಕರಿಗೆ ಇನ್ನೂ ಬಾಡಿಗೆ ಹಣ ಪಾವತಿ ಆಗಿಲ್ಲ.

‘ಬಾಲಕನನ್ನು ರಕ್ಷಿಸಿದ್ದಕ್ಕೆ ಎಲ್ಲರೂ ಶ್ಲಾಘಿಸಿದ್ದರು. 22 ಗಂಟೆ ನಾವೆಲ್ಲ ವಾಹನ, ಯಂತ್ರಗಳ ಮಾಲೀಕರು ಬೇರೆ ಬೇರೆ ಸ್ವರೂಪದಲ್ಲಿ ನೆರವಾಗಿದ್ದೆವು. ಬಾಡಿಗೆ ಹಣವು ಶೀಘ್ರವೇ ಪಾವತಿಯಾಗಲಿದೆ ಎಂಬ ಭರವಸೆ ಸಿಗುತ್ತಿದೆ ಹೊರತು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದು ವಾಹನ, ಯಂತ್ರಗಳ ಮಾಲೀಕರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹಿಟ್ಯಾಚಿ ವಾಹನ–2, ಟ್ರ್ಯಾಕ್ಟರ್ ಬ್ರೇಕರ್–4, ಜೆಸಿಬಿ ವಾಹನ–3, ಟ್ಯಾಕ್ಟರ್–3, ನೀರಿನ ಟ್ಯಾಂಕರ್–1, ಹ್ಯಾಂಡ್ ಡ್ರಿಲ್ಲಿಂಗ್ ಯಂತ್ರ–1 ಸೇರಿ ಹಲವು ವಾಹನ, ಯಂತ್ರಗಳು ಕಾರ್ಯಾಚರಣೆಗೆ ಬಳಕೆ ಆಗಿದ್ದವು. ₹ 3.70 ಲಕ್ಷಕ್ಕೂ ಹೆಚ್ಚು ಖರ್ಚಾಗಿತ್ತು. ಸರ್ಕಾರವು ಬೇಗನೇ ಬಾಡಿಗೆ ಹಣ ಪಾವತಿಸಿದರೆ, ನಮಗೆ ಅನುಕೂಲವಾಗುತ್ತದೆ’ ಎಂದರು.

ಕಾರ್ಯಾಚರಣೆಗೆ ನೆರವಾದ ಎಲ್ಲ ವಾಹನಗಳ ಮಾಲೀಕರಿಗೂ ಶೀಘ್ರವೇ ಬಾಡಿಗೆ ಹಣ ಪಾವತಿಸಲು ಸಂಬಂಧಿಸಿದವರಿಗೆ ಸೂಚಿಸುವೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವೆ
ಯಶವಂತರಾಯಗೌಡ ಪಾಟೀಲ ಶಾಸಕ
ಅನುದಾನ ಬಿಡುಗಡೆಗೆ ಲೋಕೋಪಯೋಗಿ ಇಲಾಖೆ ಮೂಲಕ ಅಂದಾಜು ಪತ್ರಿಕೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಮಂಜೂರಾದ ಕೂಡಲೇ ಬಾಡಿಗೆ ಪಾವತಿಸಲಾಗುವುದು
ಅಬೀದ್ ಗದ್ಯಾಳ್ ಉಪವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.